hsv

"ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ." - ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

Wednesday, 4 December 2024

Hole Anjaneya & Vaidyanatheshwara Temple, Madduru- ಮದ್ದೂರು- 30-11-2024

ಮದ್ದೂರಿನಲ್ಲೊಂದು ಸುತ್ತು….
--------------------------
ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ವೀಕ್ಷಣೆ ಬಳಿಕ ಪಕ್ಕದ ಮದ್ದೂರು ಪಟ್ಟಣಕ್ಕೆ ನಾನು ಮತ್ತು ಬಿ.ಎಸ್. ವೆಂಕಟೇಶ್ ( ದಿ.30-11-2024) ತೆರಳಿದೆವು. ಗೌಡಗೆರೆಯು ರಾಮನಗರ ಜಿಲ್ಲೆ ಚೆನ್ನಪಟ್ಟಣ ತಾಲ್ಲೂಕಿಗೆ ಸೇರಿದ್ದರೆ, ಮದ್ದೂರು ತಾಲ್ಲೂಕು ಮಂಡ್ಯ ಜಿಲ್ಲೆಗೆ ಸೇರಿದೆ.
ಮದ್ದೂರಿನ ಮುಖ್ಯರಸ್ತೆ ಪಕ್ಕದ ಕ್ರಾಸ್ ನಲ್ಲಿ ಶಿಂಶಾ ನದಿ ದಂಡೆಯಲ್ಲಿರುವ ಸುಪ್ರಸಿದ್ಧ ಹಾಗೂ ಪುರಾತನವಾದ, ಮುಜರಾಯಿ ಇಲಾಖೆಗೆ ಸೇರಿರುವ ಶ್ರೀ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಹೋದಾಗ ಮಧ್ಯಾಹ್ನ 1-30 ದಾಟಿತ್ತು. ಆದರೂ ಜನಜಂಗುಳಿ ಇತ್ತು. ಪ್ರಶಾಂತ ಪರಿಸರದಲ್ಲಿ ದೇವರ ದರ್ಶನ ಆಯಿತು. ಪ್ರಸಾದ ಸ್ವೀಕರಿಸಿದೆವು. ಪಕ್ಕದಲ್ಲೇ ಖಾಸಗಿಯವರಿಗೆ ಸೇರಿದ ಶ್ರೀ ಶ್ರೀನಿವಾಸ ದೇವಾಲಯವಿದ್ದು ಅದನ್ನೂ ವೀಕ್ಷಿಸಿದೆವು. ಅಲ್ಲಿ ಗೋಶಾಲೆಯೂ ಇದೆ. ಬಳಿಕ ಅಲ್ಲಿಂದ ಸುಮಾರು 2 ಕಿ.ಮೀ. ಅಂತರದಲ್ಲಿರುವ ಪುರಾತನ ಹಾಗೂ ಸುಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯಕ್ಕೆ ಹೋದೆವು. ಆದರೆ ಆ ಹೊತ್ತಿಗೆ ದೇವಾಲಯದ ಬಾಗಿಲು ಮುಚ್ಚಿತ್ತು. ಇದೂ ಸಹ ಮುಜರಾಯಿ ಇಲಾಖೆಯದ್ದು. ಹೊರಗಿಂದಲೇ ಅನೇಕ ಭಕ್ತರು ದೇವರಿಗೆ ನಮಿಸುತ್ತಿದ್ದರು. ಈ ದೇವಾಲಯವೂ ಶಿಂಶಾ ನದಿಯ ದಂಡೆಯಲ್ಲಿದ್ದು, ಭಕ್ತರು ನದಿಗೂ ಪೂಜಿಸುತ್ತಾರೆ. ಇದರ ಪಕ್ಕದಲ್ಲೇ ಖಾಸಗಿ ಟ್ರಸ್ಟ್ ಒಂದು ದಾಸೋಹ ಭವನ ನಿರ್ಮಿಸಿಕೊಂಡು ನಿತ್ಯ ದಾಸೋಹ ವ್ಯವಸ್ಥೆ ಮಾಡಿದೆ. ಅಲ್ಲಿ ಮಧ್ಯಾಹ್ನ 3 ಗಂಟೆಯವರೆಗೂ ಅನ್ನ ದಾಸೋಹ (ಅನ್ನ, ಸಾರು, ಮಜ್ಜಿಗೆ ಮತ್ತು ಪಾಯಸ) ನಡೆಯುತ್ತದೆ. ನಾವು ದೇವಾಲಯದ ಆವರಣದಲ್ಲಿದ್ದಾಗ ನಮ್ಮನ್ನು ಟ್ರಸ್ಟ್ ಸಿಬ್ಬಂದಿ ಪ್ರಸಾದ ಸ್ವೀಕರಿಸಲು ಆಹ್ವಾನಿಸಿದರು. ಅಲ್ಲೇ ನಾವು ಪ್ರಸಾದ ಸ್ವೀಕರಿಸಿದೆವು. ಅಚ್ಚುಕಟ್ಟಾದ ಕಟ್ಟಡಗಳು, ಅಚ್ಚುಕಟ್ಟಾದ ಊಟದ ವ್ಯವಸ್ಥೆ ಗಮನ ಸೆಳೆದವು.
ಊಟ ಮುಗಿಸಿ ಹೊರಟಾಗ ಮದ್ದೂರಿನ ಪತ್ರಕರ್ತ ಮಿತ್ರರಾದ ಶ್ರೀ ಕೆ.ಎನ್.ಪುಟ್ಟಲಿಂಗಯ್ಯನವರ ಭೇಟಿ ಆಯಿತು. ಇವರು ನನಗೆ ಸುಮಾರು 20-22 ವರ್ಷಗಳಿಗೂ ಹಿಂದಿನ ಪರಿಚಯ. ಆಗ ಇವರು ತುಮಕೂರಿನಲ್ಲಿ “ವಿಜಯಕರ್ನಾಟಕ”ದ ಜಿಲ್ಲಾ ವರದಿಗಾರರಾಗಿದ್ದರು. ದಶಕದ ಹಿಂದೆ ತುಮಕೂರಿಗೆ ಮತ್ತೆ ಬಂದ ಇವರು, “ತುಮಕೂರು ವಾರ್ತೆ” ಜಿಲ್ಲಾ ಪತ್ರಿಕೆಯ ಸಂಪಾದಕರಾದರು. ಬಳಿಕ ಅದರ ಪ್ರಕಾಶಕರೂ ಆದರು. ಕೆಲವರ್ಷಗಳ ಬಳಿಕ “ತುಮಕೂರು ವಾರ್ತೆ”ಯನ್ನು ಮತ್ತೊಬ್ಬರಿಗೆ ಹಸ್ತಾಂತರಿಸಿದರು. ಇವರು ಮಂಡ್ಯದಲ್ಲಿ ಅದಾಗಲೇ ಅಸ್ತಿತ್ವದಲ್ಲಿದ್ದ “ಉದಯಕಾಲ” ಎಂಬ ದಿನಪತ್ರಿಕೆಯ ಸಂಪಾದಕರಾಗಿ ಅದರ ತುಮಕೂರು ಆವೃತ್ತಿಯನ್ನು ಹೊರತಂದರು. ಸ್ವಲ್ಪ ಕಾಲದಲ್ಲೇ ಅದನ್ನು ರಾಜ್ಯ ಮಟ್ಟದ ಪತ್ರಿಕೆಯಾಗಿ ಉನ್ನತೀಕರಿಸಿದ್ದು, ಇದೀಗ “ಉದಯಕಾಲ” ದಿನಪತ್ರಿಕೆಯ ಸಂಪಾದಕರಾಗಿ ಶ್ರೀ ಪುಟ್ಟಲಿಂಗಯ್ಯರವರು ತಮ್ಮದೇ ಛಾಪು ಮೂಡಿಸಿದ್ದಾರೆ. ತಮ್ಮ ಕಾರ್ಯಕ್ಷೇತ್ರವನ್ನು ಕೆಲವರ್ಷಗಳ ಹಿಂದೆಯಷ್ಟೇ ತುಮಕೂರಿನಿಂದ ತಮ್ಮ ಸ್ವಂತ ತಾಲ್ಲೂಕಾದ ಮದ್ದೂರು ಪಟ್ಟಣಕ್ಕೆ ಸ್ಥಳಾಂತರಿಸಿಕೊಂಡಿದ್ದಾರೆ.
ಶ್ರೀ ಪುಟ್ಟಲಿಂಗಯ್ಯನವರ ಭೇಟಿ ಮತ್ತು ಮಾತುಕತೆ ಸಂತೋಷವನ್ನುಂಟುಮಾಡಿತು. ಬಳಿಕ ಅವರು ಮದ್ದೂರಿನ ಶ್ರೀ ನರಸಿಂಹಸ್ವಾಮಿ ದೇವಾಲಯ ನೋಡಲೇಬೇಕು ಎಂದು ನಮ್ಮನ್ನು ಊರೊಳಗಿರುವ ದೇಗುಲಕ್ಕೆ ಕರೆದೊಯ್ದರು. ಆಗ ವೇಳೆ ಮಧ್ಯಾಹ್ನ 3 ಗಂಟೆ ಆಗುತ್ತಿತ್ತು. ದೇವಾಲಯ ಮುಚ್ಚುವ ಹೊತ್ತು. ಆದರೂ ನಮಗೆ ದೇವರ ದರ್ಶನವಾಯಿತು. ಪ್ರಸಾದವೂ ಲಭಿಸಿತು. ಇಲ್ಲಿರುವ ದೇವರು ಉಗ್ರನರಸಿಂಹಸ್ವಾಮಿ. ಹಿರಣ್ಯಕಶಿಪುವಿನ ಹೊಟ್ಟೆಯನ್ನು ಬಗೆಯುತ್ತಿರುವ ಉಗ್ರ ಸ್ವರೂಪಿ ನರಸಿಂಹನ ಅಪರೂಪದ ವಿಗ್ರಹವಿರುವುದು ಇಲ್ಲಿನ ವಿಶೇಷ. ಪುರಾಣ ಪ್ರಸಿದ್ಧವಾದ ಈ ಬೃಹತ್ ದೇವಾಲಯವು ಪ್ರಾಚ್ಯವಸ್ತು ಇಲಾಖೆಗೆ ಸೇರಿದೆ. ಪಕ್ಕದಲ್ಲೇ ಸುಪ್ರಸಿದ್ಧ ಶ್ರೀ ವರದರಾಜಸ್ವಾಮಿ ದೇವಾಲಯ ಹಾಗೂ ಶ್ರೀ ಪಟ್ಟಾಭಿರಾಮ ದೇವಾಲಯವಿದ್ದು, ಆ ಹೊತ್ತಿಗೆ ದೇವಾಲಯದ ವೇಳೆ ಮುಗಿದು ಬಾಗಿಲು ಹಾಕಲ್ಪಟ್ಟಿದ್ದವು. ಹೊರಗಿನಿಂದಲೇ ನೋಡಿ, ನಮಿಸಿದೆವು. ಶ್ರೀ ಪುಟ್ಟಲಿಂಗಯ್ಯನವರಿಂದ ಬೀಳ್ಕೊಂಡು, ಮಧ್ಯಾಹ್ನ 3-15 ಕ್ಕೆ ಅಲ್ಲಿಂದ ಹೊರಟೆವು. ಸಂಜೆ 4-45 ರ ಹೊತ್ತಿಗೆ ತುಮಕೂರಿನಲ್ಲಿದ್ದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 01-12-2024, #rsiyertumakuru







------------------------------------------ VIDEO----------------------------------------
 




Monday, 2 December 2024

Gowdagere - 30-11-2024- ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಕ್ಷೇತ್ರ

ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ...
---------------------------



ಇದ್ದಕ್ಕಿದ್ದಂತೆ ಇಂದು (ದಿ.30-11-2024) ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡುವ ಅವಕಾಶ ದೊರೆಯಿತು. ಗೌಡಗೆರೆಯು ನಮ್ಮ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗದ ಗಡಿಯಂಚಿನಲ್ಲಿ ಇದ್ದರೂ, ಇದು ಪಕ್ಕದ ರಾಮನಗರ ಜಿಲ್ಲೆ ಚೆನ್ನಪಟ್ಟಣ ತಾಲ್ಲೂಕಿಗೆ ಸೇರುತ್ತದೆ. ಮಿತ್ರರಾದ ಹಾಗೂ ಈ ಕ್ಷೇತ್ರದಲ್ಲಿ ಸುಪರಿಚಿತರಾಗಿರುವ ಶ್ರೀ ಬಿ.ಎಸ್.ವೆಂಕಟೇಶ್ (ಬೆಳಗುಂಬ) ರವರು ನಿನ್ನೆ ಭೇಟಿಯಾದಾಗ "ನಾಳೆ ಬೆಳಿಗ್ಗೆ ಹೋಗೋಣ ಬನ್ನಿ" ಎಂದು ಆಹ್ವಾನಿಸಿದರು. ಅಲ್ಲಿಗೆ ಹೋಗಬೇಕೆಂಬ ಬಹುಕಾಲದ ನನ್ನ ಅಪೇಕ್ಷೆ ಹೀಗೆ ಅನಿರೀಕ್ಷಿತವಾಗಿ ಈಡೇರಲಿದೆಯೆಂದರೆ ಇಲ್ಲ ಎನ್ನಲಾದೀತೇ? ತಕ್ಷಣವೇ ಒಪ್ಪಿದೆ. ಇಂದು ಅವರೊಂದಿಗೆ ಹೋಗಿಬಂದೆ.
ಗೌಡಗೆರೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಭವ್ಯ ದೇಗುಲವಿದೆ. ಬಸವಣ್ಣನಿಗೂ ಪ್ರಖ್ಯಾತಿ ಹೊಂದಿದೆ. ದೇಗುಲದ ಪಾರ್ಶ್ವದಲ್ಲೇ ಭವ್ಯ ಹಾಗೂ ದಿವ್ಯವಾದ ಶ್ರೀ ಚಾಮುಂಡೇಶ್ವರಿ ವಿಗ್ರಹವಿದೆ. ಸುಮಾರು 20 ಅಡಿಗಳಷ್ಟು ಎತ್ತರದ ಪೀಠದ ಮೇಲೆ ಇದನ್ನು ಪಂಚಲೋಹದಿಂದ ನಿರ್ಮಿಸಲಾಗಿದೆ. 18 ಕೈಗಳುಳ್ಳ ದೇವಿಯ ವಿಗ್ರಹವೇ ಸುಮಾರು 40 ಅಡಿಗಳಷ್ಟು ಎತ್ತರವಿದೆ. ದೇವಿಯ ಹಿಂಬದಿ ಬೃಹತ್ ಸಿಂಹವಿದೆ. ಹಿನ್ನೆಲೆಯಲ್ಲಿ ನೆಲದಿಂದ ಸುಮಾರು 112 ಅಡಿಗಳಷ್ಟು ಎತ್ತರ ಬರುವಷ್ಟು ಪರ್ವತವನ್ನು ಹಾಗೂ ಜಲಪಾತವನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ದೇವಿಯ ಇಕ್ಕೆಲಗಳಲ್ಲಿ ಜಿಂಕೆ, ಸಿಂಹ, ಹುಲಿ ಮೊದಲಾದ ಪ್ರಾಣಿಗಳ ಆಕೃತಿಗಳನ್ನು ನಿರ್ಮಿಸಲಾಗಿದೆ. ಅಂದರೆ ಪ್ರಕೃತಿಯ ನಡುವೆ ಪಂಚಲೋಹದಿಂದ ಕೂಡಿದ ದೇವಿಯ ವಿಗ್ರಹ ವಿಜೃಂಭಿಸುತ್ತಿದೆ. 2021 ರ ಆಗಸ್ಟ್ 8 ರಂದು ಈ ವಿಗ್ರಹ ಲೋಕಾರ್ಪಣೆಗೊಂಡಿದೆ. ಅಂದಿನಿಂದ ಪ್ರತಿನಿತ್ಯ ರಾಜ್ಯ ಹಾಗೂ ಹೊರರಾಜ್ಯಗಳ ಸಹಸ್ರಾರು ಭಕ್ತಾದಿಗಳನ್ನು ಈ ಕ್ಷೇತ್ರ ಆಕರ್ಷಿಸುತ್ತಿದೆ.
ಈ ಬೃಹತ್ ವಿಗ್ರಹವು ಹೊರಭಾಗದಲ್ಲಿದ್ದರೆ, ನೆಲ ಅಂತಸ್ತಿನಲ್ಲಿ ಒಳಭಾಗಕ್ಕೆ ಅದ್ಭುತವಾದ ಮ್ಯೂಸಿಯಂ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ 50 ರೂ. ಪ್ರವೇಶ ಶುಲ್ಕವಿದೆ. ಒಳಹೊಕ್ಕು ಹೊರಬರುವಷ್ಟರಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಷ್ಟ್ರೀಯ ಹಾಗೂ ಗ್ರಾಮೀಣ ಪರಿಸರದ ಬಹುಮುಖ ವ್ಯಕ್ತಿತ್ವಗಳನ್ನು / ಜನಜೀವನವನ್ನು ಪರಿಚಯಿಸುವ ಶಿಲ್ಪಕಲಾಕೃತಿಗಳು ಮನಸೂರೆಗೊಳ್ಳುತ್ತವೆ. ಈ ಮ್ಯೂಸಿಯಂ ಅನ್ನು ಈಗ ಇನ್ನೊಂದು ಹಂತಕ್ಕೆ ವಿಸ್ತರಿಸಿದ್ದು, ಅಲ್ಲಿ ನವದುರ್ಗೆಯರ ದೊಡ್ಡದೊಡ್ಡ ವಿಗ್ರಹಗಳು ರಾರಾಜಿಸುತ್ತಿವೆ.
ಪಕ್ಕದಲ್ಲೇ ದಾಸೋಹ ಭವನವಿದೆ. ಒಮ್ಮೆಲೆ ಒಂದು ಸಾವಿರ ಜನರು ಕುಳಿತು ಪ್ರಸಾದ ಸ್ವೀಕರಿಸಬಹುದು. ಬೆಳಗ್ಗೆ ಉಪಹಾರ ಹಾಗೂ ಬೆಳಗ್ಗೆ 11 ಗಂಟೆಯ ನಂತರ ರಾತ್ರಿಯತನಕ ನಿರಂತರವಾಗಿ ಭೋಜನ (ಅನ್ನ, ಸಾರು, ಮಜ್ಜಿಗೆ, ಪಾಯಸ) ವಿತರಿಸಲಾಗುತ್ತಿರುತ್ತದೆ. ಸಾವಿರಾರು ಭಕ್ತಾದಿಗಳು ಇಲ್ಲಿ ಪ್ರಸಾದ ಸ್ವೀಕರಿಸುತ್ತಿರುತ್ತಾರೆ.
ಇಂತಹುದೊಂದು ಕ್ಷೇತ್ರದ ರೂವಾರಿಗಳೂ, ಧರ್ಮದರ್ಶಿಗಳೂ ಆಗಿರುವ ಶ್ರೀ ಮಲ್ಲೇಶ್ ರವರನ್ನು ಭೇಟಿ ಮಾಡುವ ಸದವಕಾಶವನ್ನೂ ಶ್ರೀ ಬಿ.ಎಸ್.ವೆಂಕಟೇಶ್ ರವರು ಕಲ್ಪಿಸಿದರು. ಅತ್ಯಂತ ಸರಳ ವ್ಯಕ್ತಿತ್ವದ ಶ್ರೀ ಮಲ್ಲೇಶ್ ರವರು ಅತ್ಯಂತ ಪ್ರೀತಿಯಿಂದ ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ನನ್ನೊಡನೆ ಮಾತನಾಡಿದರು. ಈ ಕ್ಷೇತ್ರ ಪ್ರಾರಂಭವಾದ ಬಗೆ, ಕೇದಾರನಾಥದಲ್ಲಿ ಅಘೋರಿಯೊಬ್ಬರು ದೇವಿ ವಿಗ್ರಹ ಸ್ಥಾಪಿಸುವಂತೆ ನೀಡಿದ ಸಲಹೆ, ಆನಂತರ ಅದಕ್ಕಾಗಿ ಪಟ್ಟ ಶ್ರಮ, ಇಲ್ಲಿಗೇ ಅಘೋರಿಗಳು ಬಂದಿದ್ದಾಗ ಪಂಚಲೋಹದಲ್ಲೇ ವಿಗ್ರಹ ಸ್ಥಾಪಿಸುವಂತೆ ನೀಡಿದ ಸೂಚನೆ, ಆನಂತರ ಅದರ ಅನುಷ್ಠಾನ, ಕೊನೆಗೆ 2021 ರ ಆಗಸ್ಟ್ 8 ರಂದು ದೇವಿಯ ಬೃಹತ್ ವಿಗ್ರಹ ಲೋಕಾರ್ಪಣೆಗೊಂಡ ಸಂದರ್ಭದವರೆಗೆ ಎಲ್ಲವನ್ನೂ ಸುದೀರ್ಘವಾಗಿ ವಿವರಿಸಿದರು. ಪ್ರಸಾದ ನಿಲಯಕ್ಕೆ ನಮ್ಮನ್ನು ಕರೆದೊಯ್ದು ಅಲ್ಲಿನ ವ್ಯವಸ್ಥೆಯನ್ನು ವಿವರಿಸಿದರು. ಈಗ ಮ್ಯೂಸಿಯಂನಲ್ಲಿ ಸಿದ್ಧಗೊಳ್ಳುತ್ತಿರುವ ನವದುರ್ಗೆಯರ ವಿಗ್ರಹಗಳ ವಿಭಾಗಕ್ಕೂ ಕರೆದೊಯ್ದು ವಿವರಿಸಿದರು. ಅವರ ಈ ಎಲ್ಲ ಸಾಧನೆ ಬೆರಗುಗೊಳಿಸಿತು. ಎಲ್ಲರಿಂದಲೂ ಗುರೂಜಿಯೆಂದು ಗೌರವಿಸಲ್ಪಡುತ್ತಿರುವ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದೆ. ಹೊರಡುವ ಮುನ್ನ ಶ್ರೀ ಮಲ್ಲೇಶ್ ರವರು ನನಗೂ ಕಿರು ಶಾಲು ಹೊದಿಸಿ, ದೇವಿಯ ಭಾವಚಿತ್ರದ ಫೋಟೋ ನೀಡಿ ಗೌರವಿಸಿದರು. ಅತ್ಯಂತ ಸಂತೋಷವಾಯಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 30-11-2024, #rsiyertumakuru






********************************** VIDEO **********************