ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ...
---------------------------
ಇದ್ದಕ್ಕಿದ್ದಂತೆ ಇಂದು (ದಿ.30-11-2024) ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡುವ ಅವಕಾಶ ದೊರೆಯಿತು. ಗೌಡಗೆರೆಯು ನಮ್ಮ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗದ ಗಡಿಯಂಚಿನಲ್ಲಿ ಇದ್ದರೂ, ಇದು ಪಕ್ಕದ ರಾಮನಗರ ಜಿಲ್ಲೆ ಚೆನ್ನಪಟ್ಟಣ ತಾಲ್ಲೂಕಿಗೆ ಸೇರುತ್ತದೆ. ಮಿತ್ರರಾದ ಹಾಗೂ ಈ ಕ್ಷೇತ್ರದಲ್ಲಿ ಸುಪರಿಚಿತರಾಗಿರುವ ಶ್ರೀ ಬಿ.ಎಸ್.ವೆಂಕಟೇಶ್ (ಬೆಳಗುಂಬ) ರವರು ನಿನ್ನೆ ಭೇಟಿಯಾದಾಗ "ನಾಳೆ ಬೆಳಿಗ್ಗೆ ಹೋಗೋಣ ಬನ್ನಿ" ಎಂದು ಆಹ್ವಾನಿಸಿದರು. ಅಲ್ಲಿಗೆ ಹೋಗಬೇಕೆಂಬ ಬಹುಕಾಲದ ನನ್ನ ಅಪೇಕ್ಷೆ ಹೀಗೆ ಅನಿರೀಕ್ಷಿತವಾಗಿ ಈಡೇರಲಿದೆಯೆಂದರೆ ಇಲ್ಲ ಎನ್ನಲಾದೀತೇ? ತಕ್ಷಣವೇ ಒಪ್ಪಿದೆ. ಇಂದು ಅವರೊಂದಿಗೆ ಹೋಗಿಬಂದೆ.
ಗೌಡಗೆರೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಭವ್ಯ ದೇಗುಲವಿದೆ. ಬಸವಣ್ಣನಿಗೂ ಪ್ರಖ್ಯಾತಿ ಹೊಂದಿದೆ. ದೇಗುಲದ ಪಾರ್ಶ್ವದಲ್ಲೇ ಭವ್ಯ ಹಾಗೂ ದಿವ್ಯವಾದ ಶ್ರೀ ಚಾಮುಂಡೇಶ್ವರಿ ವಿಗ್ರಹವಿದೆ. ಸುಮಾರು 20 ಅಡಿಗಳಷ್ಟು ಎತ್ತರದ ಪೀಠದ ಮೇಲೆ ಇದನ್ನು ಪಂಚಲೋಹದಿಂದ ನಿರ್ಮಿಸಲಾಗಿದೆ. 18 ಕೈಗಳುಳ್ಳ ದೇವಿಯ ವಿಗ್ರಹವೇ ಸುಮಾರು 40 ಅಡಿಗಳಷ್ಟು ಎತ್ತರವಿದೆ. ದೇವಿಯ ಹಿಂಬದಿ ಬೃಹತ್ ಸಿಂಹವಿದೆ. ಹಿನ್ನೆಲೆಯಲ್ಲಿ ನೆಲದಿಂದ ಸುಮಾರು 112 ಅಡಿಗಳಷ್ಟು ಎತ್ತರ ಬರುವಷ್ಟು ಪರ್ವತವನ್ನು ಹಾಗೂ ಜಲಪಾತವನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ದೇವಿಯ ಇಕ್ಕೆಲಗಳಲ್ಲಿ ಜಿಂಕೆ, ಸಿಂಹ, ಹುಲಿ ಮೊದಲಾದ ಪ್ರಾಣಿಗಳ ಆಕೃತಿಗಳನ್ನು ನಿರ್ಮಿಸಲಾಗಿದೆ. ಅಂದರೆ ಪ್ರಕೃತಿಯ ನಡುವೆ ಪಂಚಲೋಹದಿಂದ ಕೂಡಿದ ದೇವಿಯ ವಿಗ್ರಹ ವಿಜೃಂಭಿಸುತ್ತಿದೆ. 2021 ರ ಆಗಸ್ಟ್ 8 ರಂದು ಈ ವಿಗ್ರಹ ಲೋಕಾರ್ಪಣೆಗೊಂಡಿದೆ. ಅಂದಿನಿಂದ ಪ್ರತಿನಿತ್ಯ ರಾಜ್ಯ ಹಾಗೂ ಹೊರರಾಜ್ಯಗಳ ಸಹಸ್ರಾರು ಭಕ್ತಾದಿಗಳನ್ನು ಈ ಕ್ಷೇತ್ರ ಆಕರ್ಷಿಸುತ್ತಿದೆ.
ಈ ಬೃಹತ್ ವಿಗ್ರಹವು ಹೊರಭಾಗದಲ್ಲಿದ್ದರೆ, ನೆಲ ಅಂತಸ್ತಿನಲ್ಲಿ ಒಳಭಾಗಕ್ಕೆ ಅದ್ಭುತವಾದ ಮ್ಯೂಸಿಯಂ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ 50 ರೂ. ಪ್ರವೇಶ ಶುಲ್ಕವಿದೆ. ಒಳಹೊಕ್ಕು ಹೊರಬರುವಷ್ಟರಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಷ್ಟ್ರೀಯ ಹಾಗೂ ಗ್ರಾಮೀಣ ಪರಿಸರದ ಬಹುಮುಖ ವ್ಯಕ್ತಿತ್ವಗಳನ್ನು / ಜನಜೀವನವನ್ನು ಪರಿಚಯಿಸುವ ಶಿಲ್ಪಕಲಾಕೃತಿಗಳು ಮನಸೂರೆಗೊಳ್ಳುತ್ತವೆ. ಈ ಮ್ಯೂಸಿಯಂ ಅನ್ನು ಈಗ ಇನ್ನೊಂದು ಹಂತಕ್ಕೆ ವಿಸ್ತರಿಸಿದ್ದು, ಅಲ್ಲಿ ನವದುರ್ಗೆಯರ ದೊಡ್ಡದೊಡ್ಡ ವಿಗ್ರಹಗಳು ರಾರಾಜಿಸುತ್ತಿವೆ.
ಪಕ್ಕದಲ್ಲೇ ದಾಸೋಹ ಭವನವಿದೆ. ಒಮ್ಮೆಲೆ ಒಂದು ಸಾವಿರ ಜನರು ಕುಳಿತು ಪ್ರಸಾದ ಸ್ವೀಕರಿಸಬಹುದು. ಬೆಳಗ್ಗೆ ಉಪಹಾರ ಹಾಗೂ ಬೆಳಗ್ಗೆ 11 ಗಂಟೆಯ ನಂತರ ರಾತ್ರಿಯತನಕ ನಿರಂತರವಾಗಿ ಭೋಜನ (ಅನ್ನ, ಸಾರು, ಮಜ್ಜಿಗೆ, ಪಾಯಸ) ವಿತರಿಸಲಾಗುತ್ತಿರುತ್ತದೆ. ಸಾವಿರಾರು ಭಕ್ತಾದಿಗಳು ಇಲ್ಲಿ ಪ್ರಸಾದ ಸ್ವೀಕರಿಸುತ್ತಿರುತ್ತಾರೆ.
ಇಂತಹುದೊಂದು ಕ್ಷೇತ್ರದ ರೂವಾರಿಗಳೂ, ಧರ್ಮದರ್ಶಿಗಳೂ ಆಗಿರುವ ಶ್ರೀ ಮಲ್ಲೇಶ್ ರವರನ್ನು ಭೇಟಿ ಮಾಡುವ ಸದವಕಾಶವನ್ನೂ ಶ್ರೀ ಬಿ.ಎಸ್.ವೆಂಕಟೇಶ್ ರವರು ಕಲ್ಪಿಸಿದರು. ಅತ್ಯಂತ ಸರಳ ವ್ಯಕ್ತಿತ್ವದ ಶ್ರೀ ಮಲ್ಲೇಶ್ ರವರು ಅತ್ಯಂತ ಪ್ರೀತಿಯಿಂದ ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ನನ್ನೊಡನೆ ಮಾತನಾಡಿದರು. ಈ ಕ್ಷೇತ್ರ ಪ್ರಾರಂಭವಾದ ಬಗೆ, ಕೇದಾರನಾಥದಲ್ಲಿ ಅಘೋರಿಯೊಬ್ಬರು ದೇವಿ ವಿಗ್ರಹ ಸ್ಥಾಪಿಸುವಂತೆ ನೀಡಿದ ಸಲಹೆ, ಆನಂತರ ಅದಕ್ಕಾಗಿ ಪಟ್ಟ ಶ್ರಮ, ಇಲ್ಲಿಗೇ ಅಘೋರಿಗಳು ಬಂದಿದ್ದಾಗ ಪಂಚಲೋಹದಲ್ಲೇ ವಿಗ್ರಹ ಸ್ಥಾಪಿಸುವಂತೆ ನೀಡಿದ ಸೂಚನೆ, ಆನಂತರ ಅದರ ಅನುಷ್ಠಾನ, ಕೊನೆಗೆ 2021 ರ ಆಗಸ್ಟ್ 8 ರಂದು ದೇವಿಯ ಬೃಹತ್ ವಿಗ್ರಹ ಲೋಕಾರ್ಪಣೆಗೊಂಡ ಸಂದರ್ಭದವರೆಗೆ ಎಲ್ಲವನ್ನೂ ಸುದೀರ್ಘವಾಗಿ ವಿವರಿಸಿದರು. ಪ್ರಸಾದ ನಿಲಯಕ್ಕೆ ನಮ್ಮನ್ನು ಕರೆದೊಯ್ದು ಅಲ್ಲಿನ ವ್ಯವಸ್ಥೆಯನ್ನು ವಿವರಿಸಿದರು. ಈಗ ಮ್ಯೂಸಿಯಂನಲ್ಲಿ ಸಿದ್ಧಗೊಳ್ಳುತ್ತಿರುವ ನವದುರ್ಗೆಯರ ವಿಗ್ರಹಗಳ ವಿಭಾಗಕ್ಕೂ ಕರೆದೊಯ್ದು ವಿವರಿಸಿದರು. ಅವರ ಈ ಎಲ್ಲ ಸಾಧನೆ ಬೆರಗುಗೊಳಿಸಿತು. ಎಲ್ಲರಿಂದಲೂ ಗುರೂಜಿಯೆಂದು ಗೌರವಿಸಲ್ಪಡುತ್ತಿರುವ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದೆ. ಹೊರಡುವ ಮುನ್ನ ಶ್ರೀ ಮಲ್ಲೇಶ್ ರವರು ನನಗೂ ಕಿರು ಶಾಲು ಹೊದಿಸಿ, ದೇವಿಯ ಭಾವಚಿತ್ರದ ಫೋಟೋ ನೀಡಿ ಗೌರವಿಸಿದರು. ಅತ್ಯಂತ ಸಂತೋಷವಾಯಿತು.
No comments:
Post a Comment