ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (97) ರವರ ಯೋಗಕ್ಷೇಮ ವಿಚಾರಿಸಲು ಇಂದು (ದಿ. 24-02-2026) ನಮ್ಮ ಮನೆಗೆ ಬೆಂಗಳೂರಿನಿಂದ ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್, ಅವರ ಪುತ್ರ ಹೆಚ್.ಎಸ್.ಪವನ್, ಪುತ್ರಿ ಹೆಚ್.ಎಸ್.ನಮಿತಾ ಆಗಮಿಸಿದ್ದರು. ಜೊತೆಯಲ್ಲಿ ಬಂಧುಗಳಾದ ಶ್ರೀಮತಿ ಪೂರ್ಣಿಮಾ ನರಸಿಂಹರವರೂ ಇದ್ದರು. ಸಂಜೆ ನಿರ್ಗಮಿಸಿದರು. ಪರಸ್ಪರ ಭೇಟಿ, ಮಾತುಕತೆ ಎಲ್ಲರಲ್ಲೂ ಹರ್ಷೋಲ್ಲಾಸವನ್ನು ಉಂಟುಮಾಡಿತು.
“ನಮ್ಮ ತುಮಕೂರು” ನಗರದ ಹೆಮ್ಮೆಯ ದೇವರಾಯನದುರ್ಗ ಅರಣ್ಯದ ಬೆಟ್ಟದಲ್ಲಿ ಒಂದು ಕಾಲದಲ್ಲಿ ರಣಹದ್ದುಗಳು (Vultures) ಇದ್ದವು ಎಂಬುದೇ ಈ ಅರಣ್ಯ ಪ್ರದೇಶದ ಮಹತ್ವಕ್ಕೊಂದು ಸಾಕ್ಷಿಯಾಗಿತ್ತು.
ಆತ್ಮೀಯ ಮಿತ್ರ, ಈಗ ಕೆನಡಾದಲ್ಲಿರುವ ಪರಿಸರವಾದಿ ಶ್ರೀ ಅಮೀನ್ ಅಹಮದ್ 90 ರ ದಶಕದಲ್ಲಿ (1993 ಅಥವಾ 1994) ಅದೊಂದು ಭಾನುವಾರ ಬೆಳಗ್ಗೆ ಚಿಕ್ಕಪೇಟೆಯ ನಮ್ಮ ಮನೆಗೆ ಬಂದು ನನ್ನನ್ನು ಬೈಕ್ ನಲ್ಲಿ ಕೂರಿಸಿಕೊಂಡು ನೇರವಾಗಿ ದೇವರಾಯನದುರ್ಗಕ್ಕೆ ಕರೆದೊಯ್ದಿದ್ದರು. ಮೇಲಿನ ಬೆಟ್ಟದಲ್ಲಿ ದೇವಸ್ಥಾನಕ್ಕೆ ತೆರಳುವ ದಾರಿ ಕವಲೊಡೆಯುತ್ತದೆ. ಒಂದು ದಾರಿ ಶ್ರೀ ಯೋಗಾನರಸಿಂಹ ದೇವಾಲಯದ ಕಡೆಗೆ ಹಾಗೂ ಇನ್ನೊಂದು ದಾರಿ ಪೊಲೀಸ್ ವೈರ್ ಲೆಸ್ ಸ್ಟೇಷನ್ ಕಡೆಗೆ ತೆರಳುತ್ತದೆ. ಈ ಕವಲಿನ ಬಳಿ ದೇವಾಲಯಕ್ಕೆ ಹೋಗುವ ದಾರಿಯ ಬಲಬದಿಯ ಬೆಟ್ಟದಲ್ಲಿರುವ ಬಂಡೆಗಳು ರಣಹದ್ದುಗಳ ವಾಸಸ್ಥಳವಾಗಿದ್ದವು.
ದಾರಿಯ ಪಕ್ಕದ ಇಳಿಜಾರಿನಲ್ಲಿ ಕಲ್ಲು-ಮುಳ್ಳು-ಪೊದೆಗಳ ನಡುವೆ ತುಸು ಕಷ್ಟದಿಂದಲೇ ಒಳಪ್ರದೇಶಕ್ಕೆ ಹೋದೆವು. ಸ್ವಲ್ಪ ದೂರದಲ್ಲೇ ಬಂಡೆಗಳ ನಡುವೆ ರಣಹದ್ದುಗಳು ಕುಳಿತಿರುವುದನ್ನು ಅಮೀನ್ ಅಹಮದ್ ತೋರಿಸಿದರು. ಆ ಸುಡುಬಿಸಿಲಲ್ಲಿ ಕುಳಿತು ರಣಹದ್ದುಗಳ ಫೋಟೋ ಕ್ಲಿಕ್ಕಿಸಿದರು. ರಣಹದ್ದುಗಳ ಮಹತ್ವವನ್ನು- ಅದು ಹೇಗೆ ನೈಸರ್ಗಿಕ ಸ್ವಚ್ಛತೆಗಾರ ಎಂಬುದನ್ನು- ವಿವರಿಸಿದರು. ಸುಡುಬಿಸಿಲಲ್ಲಿ ಒಂದಷ್ಟು ಹೊತ್ತು ರೋಮಾಂಚನದಿಂದ ರಣಹದ್ದುಗಳನ್ನು ವೀಕ್ಷಿಸಿ ಅಂದು ನಾವು ವಾಪಸ್ಸಾಗಿದ್ದೆವು.
ರಣಹದ್ದುಗಳ ಫೋಟೋವನ್ನು ಅಮೀನ್ ಅಹಮದ್ ಆಗಲೇ ತಮ್ಮ ಫೇಸ್ ಬುಕ್ ಪುಟದಲ್ಲಿ ಬಿತ್ತರಿಸಿದ್ದರು. 2012 ರಲ್ಲಿ ನಾನು ಆ ಮಾಹಿತಿಯನ್ನು ನನ್ನ ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿಕೊಂಡಿದ್ದೆ. ಈಗ ಆ ಹಳೆಯ ನೆನಪನ್ನು ಮೆಲುಕುಹಾಕುತ್ತ ಮತ್ತೊಮ್ಮೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ...
ಅಂದಹಾಗೆ ಆ ರಣಹದ್ದುಗಳು ಈಗ ದೇವರಾಯನದುರ್ಗ ಅರಣ್ಯದ ಭಾಗದಲ್ಲಿ ಕಂಡುಬರುತ್ತಿಲ್ಲ. ಆನಂತರದಲ್ಲಿ ಎಂದೋ-ಯಾವಾಗಲೋ ಇಲ್ಲಿಂದ ಕಣ್ಮರೆ ಆಗಿದೆ ಎಂಬುದು ಮಾತ್ರ ಗಂಭೀರ ವಿಚಾರ.
97 ನೇ ವಸಂತಕ್ಕೆ ಪಾದಾರ್ಪಣೆ....ನಮ್ಮ ತಂದೆಯವರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರು ಇಂದು (ದಿ.14-01-2026, ಬುಧವಾರ, ಪೌಷ ಕೃಷ್ಣ ಏಕಾದಶಿ) 97 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನಮ್ಮ ಮನೆಯಲ್ಲಿ ಮನೆದೇವರಾದ ಶ್ರೀ ಪಳನಿ ಸುಬ್ರಹ್ಮಣ್ಯ ಸ್ವಾಮಿಗೆ ಆರತಿ ಬೆಳಗುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ಹುಟ್ಟುಹಬ್ಬದ ಈ ಸಂದರ್ಭದಲ್ಲಿ ನಮ್ಮ ಕೋರಿಕೆಯಂತೆ ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿರುವ "ಶ್ರೀ ವಲ್ಲೀ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿ"ಗೆ ಅಭಿಷೇಕ-ಪೂಜೆಯನ್ನು ಪ್ರಧಾನ ಅರ್ಚಕರಾದ ಶ್ರೀ ಕೆ.ವೈ.ಲಕ್ಷ್ಮೀನರಸಿಂಹ ಶಾಸ್ತ್ರಿಯವರು ನೆರವೇರಿಸಿಕೊಟ್ಟರು. ಪೂಜಾ ಪ್ರಸಾದದ ಜೊತೆಗೆ ಪಳನಿ ದೇವಾಲಯದ ವಿಶೇಷ ವಸ್ತ್ರವನ್ನು ಮತ್ತು ತಿರುಪತಿ ದೇವಾಲಯದ ಪ್ರಸಾದವನ್ನೂ ಅವರು ನೀಡಿದ್ದು, ಅಪಾರ ಸಂತಸವನ್ನುಂಟುಮಾಡಿತು. ಹಾಗೂ ಈ ಹುಟ್ಟುಹಬ್ಬಕ್ಕೆ ಮೆರುಗು ಕೊಟ್ಟಿತು. ದೇವರ ಪ್ರಸಾದವನ್ನು ಸ್ವೀಕರಿಸಿ ನಮ್ಮ ತಂದೆಯವರು ಸಂತೋಷಭರಿತರಾದರು.
ಶ್ರೀ ರಾಮಚಂದ್ರನ್ ರವರು ಸ್ವಾತಂತ್ರ್ಯ ಹೋರಾಟಗಾರಷ್ಟೇ ಅಲ್ಲದೆ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆಗಿದ್ದಾರೆ. 1968 ರಲ್ಲಿ ಗೆಳೆಯರೊಡಗೂಡಿ ಶ್ರೀ ಶಂಕರ ಜಯಂತಿ ಸಭಾವನ್ನು ಸ್ಥಾಪಿಸಿ, 30-35 ವರ್ಷಗಳ ಕಾಲ ಚಿಕ್ಕಪೇಟೆಯ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ಶ್ರೀ ಶಂಕರ ಜಯಂತಿ ಆಚರಣೆ, ಉತ್ಸವ, ಪೂಜಾದಿಗಳು, ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ಆ ಕಾಲದ ಪ್ರಸಿದ್ಧ ಸಂತರು, ವಿದ್ವಾಂಸರು, ಮಹನೀಯರನ್ನು ಆಹ್ವಾನಿಸಿ ಪ್ರವಚನಗಳನ್ನು ಏರ್ಪಡಿಸಿದ್ದ ಕೀರ್ತಿಗೂ ಪಾತ್ರರಾಗಿದ್ದಾರೆ.
ಶ್ರೀ ಗಾಯತ್ರಿ ಸಹಕಾರ ಸಂಘದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ
ತುಮಕೂರಿನ ಸೋಮೇಶ್ವರಪುರಂನಲ್ಲಿರುವ ಪ್ರತಿಷ್ಠಿತ ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘವು ಪ್ರಕಟಿಸಿರುವ “2026 ನೇ ಹೊಸ ವರ್ಷದ ದಿನದರ್ಶಿ ”(ಕ್ಯಾಲೆಂಡರ್)ಯನ್ನು ಇಂದು (ದಿ. 12-12-2025) ಸಂಜೆ ನಮ್ಮ ನಿವಾಸದಲ್ಲಿ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ಬಿಡುಗಡೆಗೊಳಿಸಿ, ಶುಭ ಕೋರಿದರು.
ಗಾಯತ್ರಿ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಕೆ.ವಿ.ಕುಮಾರ್ ರವರ ನೇತೃತ್ವದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಸಿ.ಫಣೀಶ್, ನಿರ್ದೇಶಕರುಗಳಾದ ಶ್ರೀ ಸಿ.ಎನ್.ರಮೇಶ್, ಶ್ರೀ ಎಸ್.ಶ್ರೀನಿವಾಸ್, ಶ್ರೀ ಡಿ.ಎಸ್.ಹರೀಶ್, ಶ್ರೀ ಟಿ.ಎಸ್.ಮಂಜುನಾಥ್, ಶ್ರೀ ಕೆ.ವಿ.ಪ್ರಕಾಶ್, ಶ್ರೀ ಟಿ.ಜಿ.ವೇದಮೂರ್ತಿ, ಶ್ರೀಮತಿ ಎಸ್.ವಿ. ರೂಪ ರವರುಗಳು ಆಗಮಿಸಿದ್ದರು. ಇವರೊಂದಿಗೆ ಸಂಘದ ಸಿ.ಇ.ಓ. ಶ್ರೀಮತಿ ಸುಕನ್ಯರವರು ಹಾಗೂ ಹೊಸ ಸಿ.ಇ.ಓ. ಆಗಿ ನಿಯುಕ್ತರಾಗಿರುವ ಶ್ರೀ ನಾಗದತ್ತ ರವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಗಾಯತ್ರಿ ಸಹಕಾರ ಸಂಘದ ಪರವಾಗಿ ಪದಾಧಿಕಾರಿಗಳು ನಮ್ಮ ತಂದೆಯವರಿಗೆ ಶಾಲು ಹೊದಿಸಿ, ಫಲತಾಂಬೂಲ ನೀಡಿ, ಮಾಲಾರ್ಪಣೆ ಮಾಡಿ ಗೌರವಿಸಿದರು ಹಾಗೂ ಆಶೀರ್ವಾದ ಪಡೆದುಕೊಂಡು ಸಂತಸ ವ್ಯಕ್ತಪಡಿಸಿದರು.
ನಾನು ಮತ್ತು ವಿಶ್ವನಾಥನ್ ಹಾಜರಿದ್ದು ಗಾಯತ್ರಿ ಸಹಕಾರ ಸಂಘದ ಈ ಎಲ್ಲ ಗಣ್ಯರ ಪ್ರೀತಿ-ವಿಶ್ವಾಸಕ್ಕೆ ಕೃತಜ್ಞತೆ ಅರ್ಪಿಸಿದೆವು.
"ಈಗ ಹೊರಡುತ್ತಿದ್ದೇವೆ. 9 ಗಂಟೆ ಹೊತ್ತಿಗೆ ನಿಮ್ಮ ಮನೆಗೆ ಬರುತ್ತೇವೆ" ಎಂದು ಇಂದು (ದಿ. 23-11-2025) ಬೆಳಗ್ಗೆ 7 ಗಂಟೆಯಲ್ಲಿ ಬೆಂಗಳೂರಿನಿಂದ ನಮ್ಮ ಚಿಕ್ಕಪ್ಪ ಶ್ರೀ ಹೆಚ್.ಎಸ್.ಶ್ರೀನಿವಾಸನ್ ರವರು ವಿಶ್ವನಾಥನ್ ಗೆ ಕರೆ ಮಾಡಿದ್ದರು. ಅದರಂತೆ ಬೆಳಗ್ಗೆ 9-30 ರ ಹೊತ್ತಿಗೆ ನಮ್ಮ ಚಿಕ್ಕಮ್ಮ ಶ್ರೀಮತಿ ವಿಮಲ ಅವರೊಡನೆ ಕಾರಿನಲ್ಲಿ ಬಂದಿಳಿದರು. ದಾರಿಯುದ್ದಕ್ಕೂ ಟ್ರಾಫಿಕ್ ಇದ್ದುದರಿಂದ ಅರ್ಧ ಗಂಟೆ ವಿಳಂಬವಾಯಿತು ಎಂದರು.
ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ರವರನ್ನು ನೋಡಿ ಕುಶಲೋಪರಿ ವಿಚಾರಿಸಲೆಂದೇ ಆಗಮಿಸಿದ್ದ ಶ್ರೀನಿವಾಸನ್ ಮತ್ತು ವಿಮಲ ದಂಪತಿ, ನಮ್ಮ ತಂದೆಗೆ ಫಲತಾಂಬೂಲ ನೀಡಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಒಂದರ್ಧ ಗಂಟೆ ಇದ್ದು ಮಾತುಕತೆಯಾಡುತ್ತಾ ವಿವಿಧ ಪ್ರಸಂಗಗಳನ್ನು ಮೆಲುಕು ಹಾಕಿದರು. ಬರುವಾಗ ದಾರಿಯಲ್ಲೇ ಉಪಾಹಾರ ಮಾಡಿಕೊಂಡು ಬಂದಿದ್ದುದರಿಂದ, ನಮ್ಮ ಮನೆಯಲ್ಲಿ ಚಹಾ ಸೇವಿಸಿ ಮತ್ತೆ ವಾಪಸ್ ಬೆಂಗಳೂರಿಗೆ ಹೊರಟರು. ಒಂದು ವರ್ಷದ ಬಳಿಕ ಅವರು ಇಲ್ಲಿಗೆ ಆಗಮಿಸಿ ನಮ್ಮೆಲ್ಲರನ್ನೂ ಭೇಟಿಯಾದದ್ದು ಉಭಯತ್ರರಲ್ಲೂ ಹರ್ಷೋಲ್ಲಾಸವನ್ನುಂಟುಮಾಡಿತು.
ನಮ್ಮ ತಂದೆ ಸ್ವಾತಂತ್ರ್ಯಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರನ್ನು ನೋಡಿ ಕುಶಲೋಪರಿ ವಿಚಾರಿಸಲು ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್ ಮತ್ತು ಆಕೆಯ ಪುತ್ರ ಹೆಚ್.ಎಸ್.ಪವನ್ ಅವರು ಬೆಂಗಳೂರಿನಿಂದ ಇಂದು (ದಿ. 08-10-2025) ತುಮಕೂರಿನ ನಮ್ಮ ಮನೆಗೆ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಮಧ್ಯಾಹ್ನ ನಮ್ಮ ತಂದೆಯವರನ್ನು ಅವರ ಕಾರಿನಲ್ಲಿ ಕೂರಿಸಿಕೊಂಡು ಗೂಳೂರಿನ ಸುಪ್ರಸಿದ್ಧ ಶ್ರೀ ಗಣಪತಿ ದೇವಾಯಲಕ್ಕೆ ತೆರಳಿದೆವು. ಅವರು ನಡೆಯಲಾಗದಿರುವುದರಿಂದ ಕಾರಿನಲ್ಲಿ ಕುಳಿತೇ ವೀಕ್ಷಿಸಿದರು. ನಾನು ಜೊತೆಯಲ್ಲಿ ಹೋಗಿದ್ದೆ. ವಿಶ್ವನಾಥನ್ ಮನೆಯಲ್ಲೇ ಇದ್ದ.
ಜಯನಗರದಿಂದ ಗಾರೆನರಸಯ್ಯನ ಕಟ್ಟೆ ಮೂಲಕ ಗೂಳೂರಿಗೆ ಹೋಗಿಬರುವಾಗ ರಿಂಗ್ ರಸ್ತೆ, ಮರಳೂರು ವೃತ್ತ, ಮರಳೂರು ಕೆರೆ, ಗೂಳೂರು, ಗಣಪತಿ ದೇವಾಲಯ, ಕುಣಿಗಲ್ ರಸ್ತೆ, ಲಕ್ಕಪ್ಪ ವೃತ್ತ, ಟೌನ್ ಹಾಲ್ ವೃತ್ತ, ಅಶೋಕ ರಸ್ತೆ, ಸ್ವಾತಂತ್ರ್ಯ ಚೌಕ, ಕೋಟೆ ಆಂಜನೇಯ ವೃತ್ತ, ಅಮಾನಿ ಕೆರೆ ರಸ್ತೆ, ಕೋತಿತೋಪು, ಎಸ್.ಎಸ್.ವೃತ್ತ, ಬಿ.ಹೆಚ್.ರಸ್ತೆ, ಎಸ್.ಐ.ಟಿ. ಕಾಲೇಜು, ಗಂಗೋತ್ರಿ ರಸ್ತೆ, ಎಸ್.ಐ.ಟಿ. ಮುಖ್ಯರಸ್ತೆ, ಶೆಟ್ಟಿಹಳ್ಳಿ ಮುಖ್ಯರಸ್ತೆ -ಹೀಗೊಂದು "ತುಮಕೂರು ನಗರ ಸಂಚಾರ"ವನ್ನು ನಮ್ಮ ತಂದೆಯವರು ಕಾರಿನಲ್ಲೇ ಮಾಡಿ, ಊರನ್ನು ನೋಡಿ ಬೆರಗಿನೊಂದಿಗೆ ಸಂತೋಷಪಟ್ಟರು. ಗಾಯತ್ರಿ ಮತ್ತು ಪವನ್ ಅವರು ಸಂಜೆ ಬೆಂಗಳೂರಿಗೆ ನಿರ್ಗಮಿಸಿದರು. ಪರಸ್ಪರ ಭೇಟಿ ಉಭಯತ್ರರಲ್ಲಿ ಅಪಾರ ಸಂತೋಷವನ್ನುಂಟುಮಾಡಿತು.