ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Wednesday, 10 June 2026

ವಿದ್ಯಾಶಂಕರ ದೇಗುಲ ಮತ್ತು ದುರ್ಗದ ಹಳ್ಳಿ ಕೆರೆ- 2026- Vidyashankara Temple and Durgadahalli Lake


ಮಳೆಗಾಲದ ಈ ದಿನಗಳಲ್ಲಿ ದುರ್ಗದಹಳ್ಳಿಯ ಕೆರೆಯಂಗಳದ ಸೊಬಗು ಅವರ್ಣನೀಯ. ಸುತ್ತಲೂ ಬೆಟ್ಟಗುಡ್ಡಗಳು. ಅರಣ್ಯ ಪ್ರದೇಶ. ಹಸಿರು ಹಾಸಿದಂತಹ ಗಿಡಮರಗಳ ನೋಟ. ನೀಲಾಗಸದಲ್ಲಿ ಕಪ್ಪು-ಬಿಳುಪಿನ ಮೋಡಗಳ ನಡುವೆ ಇಣುಕುವ ಸೂರ್ಯ. ನಡುನಡುವೆ ಬೀಳುವ ತುಂತುರು ಮಳೆ. ರೊಯ್ಯನೆ ಬೀಸುವ ಗಾಳಿ. ಪ್ರಶಾಂತ ವಾತಾವರಣ. ಇವೆಲ್ಲದರ ಮಧ್ಯೆ ಈ ಪುಟ್ಟ ಕೆರೆ. ದಡದಲ್ಲಿ ಕುಳಿತರೆ ಅಥವಾ ನಿಂತರೆ ಹೊತ್ತು ಹೋಗುವುದೇ ಗೊತ್ತಾಗದಷ್ಟು ನಮ್ಮನ್ನು ಆವರಿಸುವ ಸುಂದರ ಪರಿಸರ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 10-06-2026








 -----------------------------------------------------------------------------------------------------------------------


ಬಹುದಿನಗಳ ಬಳಿಕ ಇಂದು ನಮಗೆ ಶ್ರೀ ವಿದ್ಯಾಶಂಕರ ಸ್ವಾಮಿಯ ದರ್ಶನವಾಯಿತು. "ನಮ್ಮ ತುಮಕೂರು" ನಗರಕ್ಕೆ ಸನಿಹದ ದೇವರಾಯನದುರ್ಗದ ಅರಣ್ಯ ಪ್ರದೇಶದ ಅಂಚಿನ ದುರ್ಗದ ಹಳ್ಳಿಯಲ್ಲಿ ಪುರಾತನವಾದ ಶ್ರೀ ವಿದ್ಯಾಶಂಕರ ದೇವಾಲಯವಿದೆ. ನಿಸರ್ಗದ ನಡುವಿನ ಸುಂದರ ಪರಿಸರದಲ್ಲಿರುವ ಈ ದೇಗುಲ ನಮ್ಮ ನೆಚ್ಚಿನ ತಾಣ. ಇಂದು (ದಿ. 09-06-2026) ಮಧ್ಯಾಹ್ನ ನಾನು ಮತ್ತು ವಿಶ್ವನಾಥನ್ ಭೇಟಿ ಕೊಟ್ಟಿದ್ದೆವು.
ದೇವಾಲಯದ ಹೊರಗೆ ಒಂದು ಪಾರ್ಶ್ವದಲ್ಲಿ ಯಾರೋ ಭಕ್ತರು ಹೋಮ ಏರ್ಪಡಿಸಿದ್ದರು. ಅದಕ್ಕೆ ಆಗಮಿಸಿದ್ದ ವೈದಿಕರು ಶಾಸ್ತ್ರೋಕ್ತವಾಗಿ ಹೋಮವನ್ನು ನಡೆಸುತ್ತಾ ಮಂತ್ರ ಪಠಿಸುತ್ತಿದ್ದರು. ಸುಶ್ರಾವ್ಯವಾಗಿದ್ದ ಆ ಮಂತ್ರ ಪಠಣ ಅಲ್ಲಿನ ಪ್ರಶಾಂತ ಪರಿಸರದಲ್ಲಿ ಪ್ರತಿಧ್ವನಿಸುತ್ತ ದೈವೀಕ ವಾತಾವರಣವನ್ನು ಸೃಷ್ಟಿಸಿತ್ತು. ಇತ್ತ ದೇವಾಲಯದ ಒಳಗೆ ಅರ್ಚಕರಾದ ಶ್ರೀ ವಿಜಯಕುಮಾರ್ ರವರು ದೇವರಿಗೆ ನಿತ್ಯಪೂಜೆ, ಅಭಿಷೇಕ ನೆರವೇರಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ನಡುವೆಯೇ ಅವರು ನಮಗಾಗಿ ದೇವರಿಗೆ ಆರತಿ ಬೆಳಗಿದರು.
ನಮ್ಮ ಹಳೆಯ ಮಿತ್ರರಾದ ಶ್ರೀ ವಿಜಯಕುಮಾರ್ ರವರು ಅರಣ್ಯ ಪ್ರದೇಶದ ಈ ದೇವಾಲಯದಲ್ಲಿ 2004 ನೇ ಇಸವಿಯಿಂದಲೂ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 22 ವರ್ಷಗಳಿಂದಲೂ ಇವರು ಪ್ರತಿನಿತ್ಯ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಇಲ್ಲಿದ್ದು ಪೂಜಾ ಕಾರ್ಯಗಳನ್ನು ಶ್ರದ್ಧೆ-ಭಕ್ತಿಯಿಂದ ನೆರವೇರಿಸುತ್ತಿದ್ದಾರೆ. ಆ ಕಾಲದಿಂದಲೂ ನಾವು ಈ ದೇವಾಲಯಕ್ಕೆ ಭೇಟಿ ಕೊಡುತ್ತಿದ್ದೇವೆ. ಹಾಗೆಯೇ ಮಾತನಾಡುವಾಗ ಅನೇಕ ಹಳೆಯ ಪ್ರಸಂಗಗಳು ನೆನಪಾದವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 09-06-2026



Wednesday, 3 June 2026

ಹೆಚ್.ಕೆ.ವೇಣುಗೋಪಾಲ್ ಮತ್ತು ರಾಜೇಶ್ವರಿ ಭೇಟಿ- 2026- H K Venugopal and Rajeshwari vishit...



ನಮ್ಮ ಸಹೋದರಿ ಶ್ರೀಮತಿ ರಾಜೇಶ್ವರಿ ವೇಣುಗೋಪಾಲ್ ಮತ್ತು ಬಾವ ಶ್ರೀ ಹೆಚ್.ಕೆ.ವೇಣುಗೋಪಾಲ್ ರವರು ದಿ. 02-06-2026 ರಂದು ನಮ್ಮ ಮನೆಗೆ ಆಗಮಿಸಿದ್ದರು. ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (97) ರವರ ಯೋಗಕ್ಷೇಮ ವಿಚಾರಿಸಿ ಅವರ ಆಶೀರ್ವಾದ ಪಡೆದುಕೊಂಡರು.




 

with Ravishankar Bhat - Shobha Malavalli - 18-06-5-2026- ರವಿಶಂಕರ್ ಭಟ್ ಮತ್ತು ಶೋಭಾ ಮಳವಳ್ಳಿಯವರೊಡನೆ....


"ಉದಯವಾಣಿ" ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ರವಿಶಂಕರ್ ಕೆ.ಭಟ್ ರವರು ಮತ್ತು ರಿಪಬ್ಲಿಕ್ ಟಿ.ವಿ. ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತೆ ಶ್ರೀಮತಿ ಶೋಭಾ ಮಳವಳ್ಳಿರವರನ್ನು ಭೇಟಿಯಾಗಿ ಮಾತನಾಡುವ ಮತ್ತು ಅವರ ಮಾತುಗಳನ್ನಾಲಿಸುವ ಸದವಕಾಶ ಇಂದು (ದಿ.18-05-2026) ನಮಗೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಲಭ್ಯವಾಯಿತು.
ವಿ.ವಿ.ಯ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿ.ವಿ. ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ "imPRESSion 2026" ರಾಜ್ಯ ಮಟ್ಟದ ಮಾಧ್ಯಮ ಹಬ್ಬ ಏರ್ಪಟ್ಟಿದೆ. ಎರಡು ದಿನಗಳ ಅವಧಿಯ ಈ ಕಾರ್ಯಕ್ರಮಕ್ಕೆ ರಾಜ್ಯದ 15 ಜಿಲ್ಲೆಗಳಿಂದ ವಿದ್ಯಾರ್ಥಿ/ನಿಯರು ಆಗಮಿಸಿದ್ದಾರೆ. ಇದರ ಉದ್ಘಾಟನಾ ಸಮಾರಂಭ ಇಂದು ನಡೆದಿದ್ದು, "ಸಮಾರಂಭಕ್ಕೆ ಬನ್ನಿ" ಎಂದು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರೂ, ಸ್ನೇಹಿತರೂ ಆದ ಡಾ.ಕೆ.ವಿ. ಸಿಬಂತಿ ಪದ್ಮನಾಭರವರು ನಮ್ಮನ್ನು ಆಹ್ವಾನಿಸಿದ್ದರು. ನಾನು ಮತ್ತು ವಿಶ್ವನಾಥನ್ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿದ್ದಾಗ, ಶ್ರೀ ರವಿಶಂಕರ್ ಕೆ.ಭಟ್ ರವರು ಮತ್ತು ಶ್ರೀಮತಿ ಶೋಭಾ ಮಳವಳ್ಳಿಯವರ ಭೇಟಿ ಆಯಿತು.
ಇದೇ ಮೊದಲಿಗೆ ಇವರೀರ್ವರ ಭೇಟಿ. ಕುಲಪತಿಗಳ ಕೊಠಡಿಯಲ್ಲಿದ್ದ ಶ್ರೀ ರವಿಶಂಕರ್ ರವರನ್ನು ಭೇಟಿ ಆಗುತ್ತಿದ್ದಂತೆ ಅವರು ನನ್ನ ಫೇಸ್ ಬುಕ್ ಬರಹಗಳ ಮೂಲಕವೇ ನನ್ನನ್ನು ಗುರುತಿಸಿ ಸಂತಸದಿಂದ ಮಾತನಾಡಿಸಿದರು. ಫೇಸ್ ಬುಕ್ ನಲ್ಲಿ ನಾನು ಬರೆಯುವ ವಿಷಯಗಳ ಬಗ್ಗೆ ಹೇಳುತ್ತಲೇ ನನ್ನನ್ನು ಶ್ರೀಮತಿ ಶೋಭಾ ಮಳವಳ್ಳಿಯವರಿಗೆ ಅವರೇ ಸ್ವತಃ ಪರಿಚಯಿಸಿದರು. ಈರ್ವರೂ ತುಂಬ ಸೌಜನ್ಯದಿಂದ, ವಿಶ್ವಾಸದಿಂದ ನಮ್ಮೊಡನೆ ಮಾತನಾಡಿದರು. ತುಂಬ ಸಂತೋಷವಾಯಿತು.
ಬಳಿಕ ವಿ.ವಿ. ಕಾರ್ಯಕ್ರಮದಲ್ಲಿ ಶ್ರೀ ರವಿಶಂಕರ್ ಕೆ.ಭಟ್ ರವರು ಅರ್ಥಪೂರ್ಣವಾಗಿ ಮಾತನಾಡಿದರು. ಮೂರು-ಮೂರೂವರೆ ದಶಕಗಳ ಹಿಂದೆ ಮಾಧ್ಯಮ ಮತ್ತು ಸಂವಹನಕ್ಕೆ ನಮ್ಮ ತಲೆಮಾರಿಗೆ ಇದ್ದದ್ದು ಎಂದರೆ, ದೂರದರ್ಶನ, ರೇಡಿಯೋ, ವಾರ್ತಾ ಪತ್ರಿಕೆ, ಲ್ಯಾಂಡ್ ಲೈನ್ ಟೆಲಿಫೋನ್, ಇನ್ ಲ್ಯಾಂಡ್ ಲೆಟರ್, ಪೋಸ್ಟ್ ಕಾರ್ಡ್ ಮತ್ತು ತುರ್ತು ಸಂದರ್ಭಕ್ಕಾಗಿ ಟೆಲಿಗ್ರಾಂ ಮಾತ್ರ. ಆಗ ಯಾವುದೇ ದಾವಂತ ಇರುತ್ತಿರಲಿಲ್ಲ. ಸಾವಕಾಶದ ಬದುಕು ಅದಾಗಿತ್ತು. ಆ ಕಾಲ ಮುಗಿದುಹೋಯಿತು. ಈಗ ಎಲ್ಲವೂ ಬದಲಾಗಿದೆ. ಈಗ ಎಲ್ಲದರಲ್ಲೂ ವಿಪರೀತ ವೇಗದ ಜೊತೆಗೆ ವಿಪರೀತ ಗೊಂದಲವೂ ಸೇರಿಕೊಂಡಿದೆ. ಸೋಷಿಯಲ್ ಮೀಡಿಯಾಗಳು, ಯೂಟ್ಯೂಬ್ ಎಲ್ಲ ಆಗಿ ಕೊನೆಗೆ ದಿನಪತ್ರಿಕೆಗಳು ಬರುವಂತಾಗಿದೆ. ಸಂವಹನಕ್ಕೆ ನೂರಾರು ವೇದಿಕೆಗಳಿವೆ. ಯಾವುದು ನಿಜ, ಯಾವುದು ಸುಳ್ಳು ಎಂಬುದೇ ಗೊತ್ತಾಗದಷ್ಟು ಗೊಂದಲಕಾರಿಯಾಗುತ್ತಿದೆ. ಅಂಗೈಯಲ್ಲೇ ಎಲ್ಲವೂ ಸಿಗುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಕಲಿ ಮಾಹಿತಿಗಳಿಗೆ ಬಲಿಯಾಗದಿರಲು ವಿವೇಚನೆ ಬಳಸಬೇಕಾಗಿದೆ. ವಿಶೇಷವಾಗಿ ಯುವಜನರು ನಕಾರಾತ್ಮಕ ಮಾಹಿತಿಗಳ ಬದಲು, ಸಕಾರಾತ್ಮಕ ವಿಷಯಗಳನ್ನೇ ಸಂವಹನಕ್ಕೆ ಬಳಸಬೇಕು. ಇದಲ್ಲದೆ ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡವನ್ನು ಉಳಿಸಬೇಕು ಎಂದು ತಮ್ಮ ಅನಿಸಿಕೆಯನ್ನು ಅವರು ಹಂಚಿಕೊಂಡರು.
ಶ್ರೀಮತಿ ಶೋಭಾ ಮಳವಳ್ಳಿರವರು ಮಾತನಾಡಿ, ಇಂದು ಸ್ಪರ್ಧಾತ್ಮಕ ಕಾಲ. ಯಾರಿಗೆ ಪ್ರತಿಭೆಯಿದೆಯೋ ಅವರಿಗೆ ಬೇಕಾದಷ್ಟು ಉದ್ಯೋಗಾವಕಾಶಗಳು ಲಭಿಸುವ ಕಾಲವಾಗಿದೆ ಎಂದರು. ಮಾಧ್ಯಮ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ಆಧುನಿಕ ತಾಂತ್ರಿಕತೆ ಅಂಗೈಯಲ್ಲೇ ಸಿಗುವ ಈ ಕಾಲಘಟ್ಟದಲ್ಲಿ ಇದನ್ನು ಸದ್ಬಳಕೆ ಮಾಡಿಕೊಂಡು ಸ್ವಯಂ ಮುಂದೆ ಬರಬೇಕು ಎಂದು ಅಭಿಪ್ರಾಯಪಟ್ಟರು.
ಮಾಧ್ಯಮಕ್ಕೆ ಸಂಬಂಧಿಸಿದಂತೆ ಒಂದೊಳ್ಳೆಯ ಉಪನ್ಯಾಸ ಕೇಳಿದ ಸಂತೋಷವಾಯಿತು. ಇಂತಹ ಉತ್ತಮ ಕಾರ್ಯಕ್ರಮದ ಆಯೋಜಕರಾದ ಡಾ. ಸಿಬಂತಿ ಪದ್ಮನಾಭರವರು ಅಭಿನಂದನಾರ್ಹರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 18-05-2026 #rsiyertumakuru




 

Saturday, 16 May 2026

ಜಲಸಂರಕ್ಷಣಾ ತಜ್ಷ ಶಿವಾನಂದ ಕಳವೆರವರೊಡನೆ / Shivananda Kalave / 16-05-2026


ನಾಡಿನ ಪ್ರಸಿದ್ಧ ಪರಿಸರ ತಜ್ಞರೂ, ವಿಶೇಷವಾಗಿ ಜಲಸಂರಕ್ಷಣಾ ಪರಿಣತರಾಗಿ ಹೆಸರು ಗಳಿಸಿರುವ ಶಿರಸಿಯ ಶ್ರೀ ಶಿವಾನಂದ ಕಳವೆಯವರನ್ನು ಭೇಟಿ ಮಾಡುವ, ಅವರ ಮಾತುಗಳನ್ನಾಲಿಸುವ ಸುಸಂದರ್ಭ ಇಂದು (ದಿ.16-05-2026) ನನಗೆ ಮತ್ತು ವಿಶ್ವನಾಥನ್ ಗೆ ಒದಗಿಬಂತು.

ಜಯಮಂಗಲಿ ನದಿ ನಮ್ಮ ತುಮಕೂರು ಜಿಲ್ಲೆಯ ಹೆಮ್ಮೆ. ಪ್ರಸಿದ್ಧ ಯಾತ್ರಾಸ್ಥಳ ದೇವರಾಯನದುರ್ಗದಲ್ಲಿ ಹುಟ್ಟಿ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಒಟ್ಟಾರೆ ಸುಮಾರು 110 ಕಿ.ಮೀ. ಹರಿದು ಕೊನೆಗೊಳ್ಳುತ್ತದೆ. ಈ ನದಿಯನ್ನು ಪುನಶ್ಚೇತನಗೊಳಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಇಂದು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಒಂದು ದಿನದ ಕಾರ್ಯಾಗಾರ ವಿ.ವಿ. ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಏರ್ಪಟ್ಟಿತ್ತು. ಆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲು ಶಿವಾನಂದ ಕಳವೆಯವರು ಆಗಮಿಸಿದ್ದರು. ಈ ವಿಶೇಷ ಕಾರ್ಯಕ್ರಮ ನಡೆಯುವ ಮಾಹಿತಿ ತಿಳಿದಾಗಲೇ ಇದರಲ್ಲಿ ಪಾಲ್ಗೊಳ್ಳಬೇಕೆಂಬಾಸೆ ಮೂಡಿತ್ತು. ಬಳಿಕ ಕಳವೆಯವರು ಭಾಗವಹಿಸುತ್ತಿರುವುದು ತಿಳಿದಾಗ ಅವರನ್ನು ಭೇಟಿ ಮಾಡಬೇಕೆಂಬ ಮತ್ತು ಅವರ ಮಾತುಗಳನ್ನು ಕೇಳಬೇಕೆಂಬ ಆಕಾಂಕ್ಷೆ ಮತ್ತಷ್ಟು ಬಲವಾಯಿತು. ನಾವಿಂದು ಅಲ್ಲಿಗೆ ಹೋದಾಗ ಇದು ಫಲಿಸಿತು.
ಶಿವಾನಂದ ಕಳವೆಯವರ ದಿಕ್ಸೂಚಿ ಭಾಷಣ ತಜ್ಞತೆಯಿಂದ ಕೂಡಿತ್ತು. "ನಮ್ಮ ನದಿಗಳ ಹಂತಕರು ನಾವೇ" ಎಂಬ ಅವರ ತೀಕ್ಷ್ಣವಾದ ಮಾತು ಕಠೋರ ಸತ್ಯವನ್ನು ಸಾರಿ ಹೇಳುತ್ತಿತ್ತು. ನದಿ ಮೂಲದ ಬಂಡೆಗಲ್ಲುಗಳನ್ನು ನಾಶ ಮಾಡಿದ್ದು, ನದಿ ಪಾತ್ರದ ಮರಳನ್ನು ಲೂಟಿ ಮಾಡಿದ್ದು, ನದಿ ಮೂಲ ಮತ್ತು ಪಾತ್ರದಲ್ಲಿನ ನೈಸರ್ಗಿಕ ಅರಣ್ಯವನ್ನು ನಾಶಗೊಳಿಸಿದ್ದು, ನದಿಗೆ ಕಲುಷಿತ/ತ್ಯಾಜ್ಯ ನೀರು ಸೇರುವಂತೆ ಮಾಡಿದ್ದು, ನದಿಮೂಲದ ಪ್ರದೇಶಗಳನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಿದ್ದು, ಗುಡ್ಡ-ಬೆಟ್ಟಗಳನ್ನು ಬೋಳುಗೊಳಿಸಿದ್ದು, ಕಾಡು- ಕಣಿವೆಗಳನ್ನು ನಿರ್ನಾಮಗೊಳಿಸಿದ್ದು, ಹೆದ್ದಾರಿಗಳ ನಿರ್ಮಾಣದ ನೆಪದಲ್ಲಿ ಕೆರೆ-ಕಾಲುವೆಗಳನ್ನು ನಿರ್ಲಕ್ಷಿಸಿದ್ದು - ಹೀಗೆ ನಮ್ಮ ಅಪರಾಧಗಳನ್ನು ಒಂದೊಂದಾಗಿ ಪಟ್ಟಿಮಾಡಿ ಸಭಿಕರನ್ನು ಚಿಂತನೆಗೆ ಹಚ್ಚಿದರು.
"ನಾವೆಲ್ಲ ಚಿಕ್ಕವರಾಗಿದ್ದಾಗ ಏಪ್ರಿಲ್, ಮೇ ತಿಂಗಳು ಬಂತೆಂದರೆ ನದಿ, ಕಾಲುವೆ, ಕೆರೆ-ಕಟ್ಟೆಗಳಿಗೆ ಈಜಲು ಹೋಗುತ್ತಿದ್ದೆವು. ಆದರೆ ಈಗ ಏಪ್ರಿಲ್ -ಮೇ ತಿಂಗಳು ಬಂದರೆ ನೀರಿನ ಟ್ಯಾಂಕರ್ ಪೂರೈಸುವವರ ನಂಬರ್ ಹುಡುಕಬೇಕಾದ ಸ್ಥಿತಿ ಬಂದಿದೆ" ಎಂದು ಮಾತಿನ ನಡುವೆ ಶಿವಾನಂದ ಕಳವೆಯವರು ಹೇಳಿದ್ದು ಈ ಹೊತ್ತಿನ ಆತಂಕಕಾರಿ ಸನ್ನಿವೇಶವನ್ನು ಮನಗಾಣುವಂತೆ ಮಾಡಿತು.
ಅನೇಕ ದಿನಗಳ ಬಳಿಕ ವಿ.ವಿ.ಯಲ್ಲಿ ಇಂತಹುದೊಂದು ಒಳ್ಳೆಯ ಕಾರ್ಯಕ್ರಮ ನಡೆದುದು ಸಂತೋಷ ತಂದಿತು. ಸಂಯೋಜಕರಲ್ಲೊಬ್ಬರಾದ ಧಾನ್ಯ ಸಂಸ್ಥೆಯ ಶ್ರೀ ಮಲ್ಲಿಕಾರ್ಜುನ ಹೊಸಪಾಳ್ಯರವರು ಅಭಿನಂದನಾರ್ಹರು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 16-05-2026 #rsiyertumakuru




Wednesday, 11 March 2026

Gayathri Pavan Visit -2026 Feb - ಗಾಯತ್ರಿ, ಪವನ್ ಭೇಟಿ


ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (97) ರವರ ಯೋಗಕ್ಷೇಮ ವಿಚಾರಿಸಲು ಇಂದು (ದಿ. 24-02-2026) ನಮ್ಮ ಮನೆಗೆ ಬೆಂಗಳೂರಿನಿಂದ ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್, ಅವರ ಪುತ್ರ ಹೆಚ್.ಎಸ್.ಪವನ್, ಪುತ್ರಿ ಹೆಚ್.ಎಸ್.ನಮಿತಾ ಆಗಮಿಸಿದ್ದರು. ಜೊತೆಯಲ್ಲಿ ಬಂಧುಗಳಾದ ಶ್ರೀಮತಿ ಪೂರ್ಣಿಮಾ ನರಸಿಂಹರವರೂ ಇದ್ದರು. ಸಂಜೆ ನಿರ್ಗಮಿಸಿದರು. ಪರಸ್ಪರ ಭೇಟಿ, ಮಾತುಕತೆ ಎಲ್ಲರಲ್ಲೂ ಹರ್ಷೋಲ್ಲಾಸವನ್ನು ಉಂಟುಮಾಡಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 24-02-2026 #rsiyertumakuru





 

Tuesday, 3 March 2026

ದೇವರಾಯನ ದುರ್ಗದ ಬೆಟ್ಟದಲ್ಲಿದ್ದ ರಣಹದ್ದುಗಳು… Vultures in Devarayanadurga Hills



 

“ನಮ್ಮ ತುಮಕೂರು” ನಗರದ ಹೆಮ್ಮೆಯ ದೇವರಾಯನದುರ್ಗ ಅರಣ್ಯದ ಬೆಟ್ಟದಲ್ಲಿ ಒಂದು ಕಾಲದಲ್ಲಿ ರಣಹದ್ದುಗಳು (Vultures) ಇದ್ದವು ಎಂಬುದೇ ಈ ಅರಣ್ಯ ಪ್ರದೇಶದ ಮಹತ್ವಕ್ಕೊಂದು ಸಾಕ್ಷಿಯಾಗಿತ್ತು.

ಆತ್ಮೀಯ ಮಿತ್ರ, ಈಗ ಕೆನಡಾದಲ್ಲಿರುವ ಪರಿಸರವಾದಿ ಶ್ರೀ ಅಮೀನ್ ಅಹಮದ್ 90 ರ ದಶಕದಲ್ಲಿ (1993 ಅಥವಾ 1994) ಅದೊಂದು ಭಾನುವಾರ ಬೆಳಗ್ಗೆ ಚಿಕ್ಕಪೇಟೆಯ ನಮ್ಮ ಮನೆಗೆ ಬಂದು ನನ್ನನ್ನು ಬೈಕ್ ನಲ್ಲಿ ಕೂರಿಸಿಕೊಂಡು ನೇರವಾಗಿ ದೇವರಾಯನದುರ್ಗಕ್ಕೆ ಕರೆದೊಯ್ದಿದ್ದರು. ಮೇಲಿನ ಬೆಟ್ಟದಲ್ಲಿ ದೇವಸ್ಥಾನಕ್ಕೆ ತೆರಳುವ ದಾರಿ ಕವಲೊಡೆಯುತ್ತದೆ. ಒಂದು ದಾರಿ ಶ್ರೀ ಯೋಗಾನರಸಿಂಹ ದೇವಾಲಯದ ಕಡೆಗೆ ಹಾಗೂ ಇನ್ನೊಂದು ದಾರಿ ಪೊಲೀಸ್ ವೈರ್ ಲೆಸ್ ಸ್ಟೇಷನ್ ಕಡೆಗೆ ತೆರಳುತ್ತದೆ. ಈ ಕವಲಿನ ಬಳಿ ದೇವಾಲಯಕ್ಕೆ ಹೋಗುವ ದಾರಿಯ ಬಲಬದಿಯ ಬೆಟ್ಟದಲ್ಲಿರುವ ಬಂಡೆಗಳು ರಣಹದ್ದುಗಳ ವಾಸಸ್ಥಳವಾಗಿದ್ದವು.

ದಾರಿಯ ಪಕ್ಕದ ಇಳಿಜಾರಿನಲ್ಲಿ ಕಲ್ಲು-ಮುಳ್ಳು-ಪೊದೆಗಳ ನಡುವೆ ತುಸು ಕಷ್ಟದಿಂದಲೇ ಒಳಪ್ರದೇಶಕ್ಕೆ ಹೋದೆವು. ಸ್ವಲ್ಪ ದೂರದಲ್ಲೇ ಬಂಡೆಗಳ ನಡುವೆ ರಣಹದ್ದುಗಳು ಕುಳಿತಿರುವುದನ್ನು ಅಮೀನ್ ಅಹಮದ್ ತೋರಿಸಿದರು. ಆ ಸುಡುಬಿಸಿಲಲ್ಲಿ ಕುಳಿತು ರಣಹದ್ದುಗಳ ಫೋಟೋ ಕ್ಲಿಕ್ಕಿಸಿದರು. ರಣಹದ್ದುಗಳ ಮಹತ್ವವನ್ನು- ಅದು ಹೇಗೆ ನೈಸರ್ಗಿಕ ಸ್ವಚ್ಛತೆಗಾರ ಎಂಬುದನ್ನು- ವಿವರಿಸಿದರು. ಸುಡುಬಿಸಿಲಲ್ಲಿ ಒಂದಷ್ಟು ಹೊತ್ತು ರೋಮಾಂಚನದಿಂದ ರಣಹದ್ದುಗಳನ್ನು ವೀಕ್ಷಿಸಿ ಅಂದು ನಾವು ವಾಪಸ್ಸಾಗಿದ್ದೆವು.

ರಣಹದ್ದುಗಳ ಫೋಟೋವನ್ನು ಅಮೀನ್ ಅಹಮದ್ ಆಗಲೇ ತಮ್ಮ ಫೇಸ್ ಬುಕ್ ಪುಟದಲ್ಲಿ ಬಿತ್ತರಿಸಿದ್ದರು. 2012 ರಲ್ಲಿ ನಾನು ಆ ಮಾಹಿತಿಯನ್ನು ನನ್ನ ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿಕೊಂಡಿದ್ದೆ. ಈಗ ಆ ಹಳೆಯ ನೆನಪನ್ನು ಮೆಲುಕುಹಾಕುತ್ತ ಮತ್ತೊಮ್ಮೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ...

ಅಂದಹಾಗೆ ಆ ರಣಹದ್ದುಗಳು ಈಗ ದೇವರಾಯನದುರ್ಗ ಅರಣ್ಯದ ಭಾಗದಲ್ಲಿ ಕಂಡುಬರುತ್ತಿಲ್ಲ. ಆನಂತರದಲ್ಲಿ ಎಂದೋ-ಯಾವಾಗಲೋ ಇಲ್ಲಿಂದ ಕಣ್ಮರೆ ಆಗಿದೆ ಎಂಬುದು ಮಾತ್ರ ಗಂಭೀರ ವಿಚಾರ.

-ಆರ್.ಎಸ್.ಅಯ್ಯರ್, ತುಮಕೂರು, ದಿ.04-03-2026

https://www.facebook.com/share/p/1DrAqw61vL/