ಹಸವ

ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ- ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

gss

ಹತ್ತಿರವಿದ್ದೂ ದೂರ ನಿಲ್ಲುವೆವು, ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು, ನಾಲ್ಕು ದಿನದ ಈ ಬದುಕಿನಲಿ - ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ

Tuesday, 13 January 2026

VSR -97 / ವಿ.ಎಸ್.ರಾಮಚಂದ್ರನ್ 97 ನೇ ವಸಂತಕ್ಕೆ / 14-01-2026




 

💐 🌺 97 ನೇ ವಸಂತಕ್ಕೆ ಪಾದಾರ್ಪಣೆ....💐 🌺 ನಮ್ಮ ತಂದೆಯವರಾದ ಶ್ರೀ ವಿ.ಎಸ್.ರಾಮಚಂದ್ರನ್ ರವರು ಇಂದು (ದಿ.14-01-2026, ಬುಧವಾರ, ಪೌಷ ಕೃಷ್ಣ ಏಕಾದಶಿ) 97 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನಮ್ಮ ಮನೆಯಲ್ಲಿ ಮನೆದೇವರಾದ ಶ್ರೀ ಪಳನಿ ಸುಬ್ರಹ್ಮಣ್ಯ ಸ್ವಾಮಿಗೆ ಆರತಿ ಬೆಳಗುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
ಹುಟ್ಟುಹಬ್ಬದ ಈ ಸಂದರ್ಭದಲ್ಲಿ ನಮ್ಮ ಕೋರಿಕೆಯಂತೆ ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿರುವ "ಶ್ರೀ ವಲ್ಲೀ ದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯ ಸ್ವಾಮಿ"ಗೆ ಅಭಿಷೇಕ-ಪೂಜೆಯನ್ನು ಪ್ರಧಾನ ಅರ್ಚಕರಾದ ಶ್ರೀ ಕೆ.ವೈ.ಲಕ್ಷ್ಮೀನರಸಿಂಹ ಶಾಸ್ತ್ರಿಯವರು ನೆರವೇರಿಸಿಕೊಟ್ಟರು. ಪೂಜಾ ಪ್ರಸಾದದ ಜೊತೆಗೆ ಪಳನಿ ದೇವಾಲಯದ ವಿಶೇಷ ವಸ್ತ್ರವನ್ನು ಮತ್ತು ತಿರುಪತಿ ದೇವಾಲಯದ ಪ್ರಸಾದವನ್ನೂ ಅವರು ನೀಡಿದ್ದು, ಅಪಾರ ಸಂತಸವನ್ನುಂಟುಮಾಡಿತು. ಹಾಗೂ ಈ ಹುಟ್ಟುಹಬ್ಬಕ್ಕೆ ಮೆರುಗು ಕೊಟ್ಟಿತು. ದೇವರ ಪ್ರಸಾದವನ್ನು ಸ್ವೀಕರಿಸಿ ನಮ್ಮ ತಂದೆಯವರು ಸಂತೋಷಭರಿತರಾದರು.
ಶ್ರೀ ರಾಮಚಂದ್ರನ್ ರವರು ಸ್ವಾತಂತ್ರ್ಯ ಹೋರಾಟಗಾರಷ್ಟೇ ಅಲ್ಲದೆ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆಗಿದ್ದಾರೆ. 1968 ರಲ್ಲಿ ಗೆಳೆಯರೊಡಗೂಡಿ ಶ್ರೀ ಶಂಕರ ಜಯಂತಿ ಸಭಾವನ್ನು ಸ್ಥಾಪಿಸಿ, 30-35 ವರ್ಷಗಳ ಕಾಲ ಚಿಕ್ಕಪೇಟೆಯ ಶ್ರೀ ಲಕ್ಷ್ಮೀಕಾಂತ ಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ಶ್ರೀ ಶಂಕರ ಜಯಂತಿ ಆಚರಣೆ, ಉತ್ಸವ, ಪೂಜಾದಿಗಳು, ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ಆ ಕಾಲದ ಪ್ರಸಿದ್ಧ ಸಂತರು, ವಿದ್ವಾಂಸರು, ಮಹನೀಯರನ್ನು ಆಹ್ವಾನಿಸಿ ಪ್ರವಚನಗಳನ್ನು ಏರ್ಪಡಿಸಿದ್ದ ಕೀರ್ತಿಗೂ ಪಾತ್ರರಾಗಿದ್ದಾರೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 14-01-2026 #rsiyertumakuru

፨ ಕೆಳಗಿನ ಲಿಂಕ್ ಮೂಲಕ ಯೂಟ್ಯೂಬ್ ವಿಡಿಯೋ ವೀಕ್ಷಿಸಿ.....↓↓↓





*************************************************************************
ಮೊಮ್ಮಕ್ಕಳು - ಮರಿಮಕ್ಕಳೊಡನೆ ಮುತ್ತಜ್ಜ



ಮೊಮ್ಮಗ ವಿ.ವಿವೇಕ್, ರಶ್ಮಿ ಮತ್ತು ಮರಿಮಗ ದತ್ತಕೇಸರಿ ಭಟ್ಟ (ಒಂದೂವರೆ ವರ್ಷ)







************************************


ಮೊಮ್ಮಗಳು ಸುನಯನ, ಶಶಾಂಕ್ ಮತ್ತು ಮರಿಮಗ ಕೃಷ್ಣ (3 ವರ್ಷ)ನೊಂದಿಗೆ




*******************************************


ಶ್ರೀಮತಿ ವಿದ್ಯಾ ಶಿವಸತ್ಯ ಮತ್ತು ಕು. ಶ್ರೀರಂಜಿನಿ ಭೇಟಿ



ಶ್ರೀಮತಿ ಗಾಯತ್ರಿ ಸತ್ಯನಾರಾಯಣ ಭೇಟಿ


**********************************************


--------------------------------------------------------------------------------------------------
↓↓↓ youtube ನಲ್ಲಿ ಈ ವಿಡಿಯೋ ವೀಕ್ಷಿಸಿ....↓↓↓↓↓↓.





Saturday, 27 December 2025

Calender Released by VSR | 2025 | Gayathri Society


 ಶ್ರೀ ಗಾಯತ್ರಿ ಸಹಕಾರ ಸಂಘದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ

ತುಮಕೂರಿನ ಸೋಮೇಶ್ವರಪುರಂನಲ್ಲಿರುವ ಪ್ರತಿಷ್ಠಿತ ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘವು ಪ್ರಕಟಿಸಿರುವ “2026 ನೇ ಹೊಸ ವರ್ಷದ ದಿನದರ್ಶಿ ”(ಕ್ಯಾಲೆಂಡರ್)ಯನ್ನು ಇಂದು (ದಿ. 12-12-2025) ಸಂಜೆ ನಮ್ಮ ನಿವಾಸದಲ್ಲಿ ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರು ಬಿಡುಗಡೆಗೊಳಿಸಿ, ಶುಭ ಕೋರಿದರು.
ಗಾಯತ್ರಿ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಕೆ.ವಿ.ಕುಮಾರ್ ರವರ ನೇತೃತ್ವದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಸಿ.ಫಣೀಶ್, ನಿರ್ದೇಶಕರುಗಳಾದ ಶ್ರೀ ಸಿ.ಎನ್.ರಮೇಶ್, ಶ್ರೀ ಎಸ್.ಶ್ರೀನಿವಾಸ್, ಶ್ರೀ ಡಿ.ಎಸ್.ಹರೀಶ್, ಶ್ರೀ ಟಿ.ಎಸ್.ಮಂಜುನಾಥ್, ಶ್ರೀ ಕೆ.ವಿ.ಪ್ರಕಾಶ್, ಶ್ರೀ ಟಿ.ಜಿ.ವೇದಮೂರ್ತಿ, ಶ್ರೀಮತಿ ಎಸ್.ವಿ. ರೂಪ ರವರುಗಳು ಆಗಮಿಸಿದ್ದರು. ಇವರೊಂದಿಗೆ ಸಂಘದ ಸಿ.ಇ.ಓ. ಶ್ರೀಮತಿ ಸುಕನ್ಯರವರು ಹಾಗೂ ಹೊಸ ಸಿ.ಇ.ಓ. ಆಗಿ ನಿಯುಕ್ತರಾಗಿರುವ ಶ್ರೀ ನಾಗದತ್ತ ರವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಗಾಯತ್ರಿ ಸಹಕಾರ ಸಂಘದ ಪರವಾಗಿ ಪದಾಧಿಕಾರಿಗಳು ನಮ್ಮ ತಂದೆಯವರಿಗೆ ಶಾಲು ಹೊದಿಸಿ, ಫಲತಾಂಬೂಲ ನೀಡಿ, ಮಾಲಾರ್ಪಣೆ ಮಾಡಿ ಗೌರವಿಸಿದರು ಹಾಗೂ ಆಶೀರ್ವಾದ ಪಡೆದುಕೊಂಡು ಸಂತಸ ವ್ಯಕ್ತಪಡಿಸಿದರು.
ನಾನು ಮತ್ತು ವಿಶ್ವನಾಥನ್ ಹಾಜರಿದ್ದು ಗಾಯತ್ರಿ ಸಹಕಾರ ಸಂಘದ ಈ ಎಲ್ಲ ಗಣ್ಯರ ಪ್ರೀತಿ-ವಿಶ್ವಾಸಕ್ಕೆ ಕೃತಜ್ಞತೆ ಅರ್ಪಿಸಿದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 12-12-2025





---------------------------------------------------------------------------------------------





†************--**********************







~~~~~~~~~~~~~~~~~~~~~






Monday, 24 November 2025

Smt Vimala & H S Srinivasan Visit - 2025- ವಿಮಲ ಮತ್ತು ಶ್ರೀನಿವಾಸನ್ ಭೇಟಿ

 



"ಈಗ ಹೊರಡುತ್ತಿದ್ದೇವೆ. 9 ಗಂಟೆ ಹೊತ್ತಿಗೆ ನಿಮ್ಮ ಮನೆಗೆ ಬರುತ್ತೇವೆ" ಎಂದು ಇಂದು (ದಿ. 23-11-2025) ಬೆಳಗ್ಗೆ 7 ಗಂಟೆಯಲ್ಲಿ ಬೆಂಗಳೂರಿನಿಂದ ನಮ್ಮ ಚಿಕ್ಕಪ್ಪ ಶ್ರೀ ಹೆಚ್.ಎಸ್.ಶ್ರೀನಿವಾಸನ್ ರವರು ವಿಶ್ವನಾಥನ್ ಗೆ ಕರೆ ಮಾಡಿದ್ದರು. ಅದರಂತೆ ಬೆಳಗ್ಗೆ 9-30 ರ ಹೊತ್ತಿಗೆ ನಮ್ಮ ಚಿಕ್ಕಮ್ಮ ಶ್ರೀಮತಿ ವಿಮಲ ಅವರೊಡನೆ ಕಾರಿನಲ್ಲಿ ಬಂದಿಳಿದರು. ದಾರಿಯುದ್ದಕ್ಕೂ ಟ್ರಾಫಿಕ್ ಇದ್ದುದರಿಂದ ಅರ್ಧ ಗಂಟೆ ವಿಳಂಬವಾಯಿತು ಎಂದರು.

ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (96) ರವರನ್ನು ನೋಡಿ ಕುಶಲೋಪರಿ ವಿಚಾರಿಸಲೆಂದೇ ಆಗಮಿಸಿದ್ದ ಶ್ರೀನಿವಾಸನ್ ಮತ್ತು ವಿಮಲ ದಂಪತಿ, ನಮ್ಮ ತಂದೆಗೆ ಫಲತಾಂಬೂಲ ನೀಡಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ಒಂದರ್ಧ ಗಂಟೆ ಇದ್ದು ಮಾತುಕತೆಯಾಡುತ್ತಾ ವಿವಿಧ ಪ್ರಸಂಗಗಳನ್ನು ಮೆಲುಕು ಹಾಕಿದರು. ಬರುವಾಗ ದಾರಿಯಲ್ಲೇ ಉಪಾಹಾರ ಮಾಡಿಕೊಂಡು ಬಂದಿದ್ದುದರಿಂದ, ನಮ್ಮ ಮನೆಯಲ್ಲಿ ಚಹಾ ಸೇವಿಸಿ ಮತ್ತೆ ವಾಪಸ್ ಬೆಂಗಳೂರಿಗೆ ಹೊರಟರು. ಒಂದು ವರ್ಷದ ಬಳಿಕ ಅವರು ಇಲ್ಲಿಗೆ ಆಗಮಿಸಿ ನಮ್ಮೆಲ್ಲರನ್ನೂ ಭೇಟಿಯಾದದ್ದು ಉಭಯತ್ರರಲ್ಲೂ ಹರ್ಷೋಲ್ಲಾಸವನ್ನುಂಟುಮಾಡಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ.23-11-2025 #rsiyertumakuru





VSR Guluru Visit - 2025- ವಿ.ಎಸ್.ರಾಮಚಂದ್ರನ್ ಗೂಳೂರು ಭೇಟಿ



ನಮ್ಮ ತಂದೆ ಸ್ವಾತಂತ್ರ್ಯಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (96) ರವರನ್ನು ನೋಡಿ ಕುಶಲೋಪರಿ ವಿಚಾರಿಸಲು ನಮ್ಮ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ್ ಮತ್ತು ಆಕೆಯ ಪುತ್ರ ಹೆಚ್.ಎಸ್.ಪವನ್ ಅವರು ಬೆಂಗಳೂರಿನಿಂದ ಇಂದು (ದಿ. 08-10-2025) ತುಮಕೂರಿನ ನಮ್ಮ ಮನೆಗೆ ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ಮಧ್ಯಾಹ್ನ ನಮ್ಮ ತಂದೆಯವರನ್ನು ಅವರ ಕಾರಿನಲ್ಲಿ ಕೂರಿಸಿಕೊಂಡು ಗೂಳೂರಿನ ಸುಪ್ರಸಿದ್ಧ ಶ್ರೀ ಗಣಪತಿ ದೇವಾಯಲಕ್ಕೆ ತೆರಳಿದೆವು. ಅವರು ನಡೆಯಲಾಗದಿರುವುದರಿಂದ ಕಾರಿನಲ್ಲಿ ಕುಳಿತೇ ವೀಕ್ಷಿಸಿದರು. ನಾನು ಜೊತೆಯಲ್ಲಿ ಹೋಗಿದ್ದೆ. ವಿಶ್ವನಾಥನ್ ಮನೆಯಲ್ಲೇ ಇದ್ದ.
ಜಯನಗರದಿಂದ ಗಾರೆನರಸಯ್ಯನ ಕಟ್ಟೆ ಮೂಲಕ ಗೂಳೂರಿಗೆ ಹೋಗಿಬರುವಾಗ ರಿಂಗ್ ರಸ್ತೆ, ಮರಳೂರು ವೃತ್ತ, ಮರಳೂರು ಕೆರೆ, ಗೂಳೂರು, ಗಣಪತಿ ದೇವಾಲಯ, ಕುಣಿಗಲ್ ರಸ್ತೆ, ಲಕ್ಕಪ್ಪ ವೃತ್ತ, ಟೌನ್ ಹಾಲ್ ವೃತ್ತ, ಅಶೋಕ ರಸ್ತೆ, ಸ್ವಾತಂತ್ರ್ಯ ಚೌಕ, ಕೋಟೆ ಆಂಜನೇಯ ವೃತ್ತ, ಅಮಾನಿ ಕೆರೆ ರಸ್ತೆ, ಕೋತಿತೋಪು, ಎಸ್.ಎಸ್.ವೃತ್ತ, ಬಿ.ಹೆಚ್.ರಸ್ತೆ, ಎಸ್.ಐ.ಟಿ. ಕಾಲೇಜು, ಗಂಗೋತ್ರಿ ರಸ್ತೆ, ಎಸ್.ಐ.ಟಿ. ಮುಖ್ಯರಸ್ತೆ, ಶೆಟ್ಟಿಹಳ್ಳಿ ಮುಖ್ಯರಸ್ತೆ -ಹೀಗೊಂದು "ತುಮಕೂರು ನಗರ ಸಂಚಾರ"ವನ್ನು ನಮ್ಮ ತಂದೆಯವರು ಕಾರಿನಲ್ಲೇ ಮಾಡಿ, ಊರನ್ನು ನೋಡಿ ಬೆರಗಿನೊಂದಿಗೆ ಸಂತೋಷಪಟ್ಟರು. ಗಾಯತ್ರಿ ಮತ್ತು ಪವನ್ ಅವರು ಸಂಜೆ ಬೆಂಗಳೂರಿಗೆ ನಿರ್ಗಮಿಸಿದರು. ಪರಸ್ಪರ ಭೇಟಿ ಉಭಯತ್ರರಲ್ಲಿ ಅಪಾರ ಸಂತೋಷವನ್ನುಂಟುಮಾಡಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 08-10-2025










-------------------------------------------------------------------------------------



H K Ramesh Visit - Invitation- 2025- ಹೆಚ್.ಕೆ.ರಮೇಶ್ ಭೇಟಿ




ನಮ್ಮ ಹತ್ತಿರದ ಬಂಧುಗಳೂ, ತುಮಕೂರಿನ ಶ್ರೀ ಶೃಂಗೇರಿ ಶಂಕರ ಮಠದ ಉಪಾಧ್ಯಕ್ಷರೂ, ನಂದಿನಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ, ಬಿಜೆಪಿ ಮುಖಂಡರೂ ಆದ ಶ್ರೀ ಹೆಚ್.ಕೆ. ರಮೇಶ್ ಮತ್ತು ಶ್ರೀಮತಿ ಶುಭ ದಂಪತಿ ಇಂದು (ದಿ. 06-11-2025) ರಾತ್ರಿ ನಮ್ಮ ಮನೆಗೆ ಆಗಮಿಸಿ ತಮ್ಮ ಪುತ್ರನ ವಿವಾಹದ ಆಮಂತ್ರಣ ಪತ್ರಿಕೆಯನ್ನು ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರೂ, ಶ್ರೀ ಶಂಕರ ಜಯಂತಿ ಸಭಾದ ಸಂಸ್ಥಾಪಕರೂ ಆದ ಶ್ರೀ ವಿ.ಎಸ್.ರಾಮಚಂದ್ರನ್ (96) ಅವರಿಗೆ ನೀಡಿ ಶುಭಾಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ನಾನು ಮತ್ತು ಆರ್. ವಿಶ್ವನಾಥನ್ ಇದ್ದೆವು.

ಶ್ರೀ ಹೆಚ್.ಕೆ.ರಮೇಶ್ ಅವರ ಜ್ಯೇಷ್ಠ ಪುತ್ರ ಚಿ||ರಾ|| ರಾಹುಲ್ ಆರ್.ಭಟ್ ಇಂಗ್ಲೆಂಡ್ ನಲ್ಲಿ ವಿದ್ಯಾಭ್ಯಾಸ ಮಾಡಿ ಸದ್ಯ ಅಲ್ಲೇ ವೃತ್ತಿಯಲ್ಲಿರುವ ಪ್ರತಿಭಾವಂತ. ಉತ್ತರಕನ್ನಡ ಜಿಲ್ಲೆ ಅಂಕೋಲದ ಶ್ರೀ ಜಿ.ವಿ. ಹೆಗಡೆ ಮತ್ತು ಶ್ರೀಮತಿ ಭಾಗೀರಥಿ ದಂಪತಿಯ ಸುಪುತ್ರಿ ಚಿ||ಸೌ|| ಸೌಜನ್ಯ ಹೆಗಡೆ ಅವರೊಡನೆ ದಿ. 01-12-2025 ರಂದು ಅಂಕೋಲದಲ್ಲಿ ವಿವಾಹ ಮಹೋತ್ಸವ ನೆರವೇರಲಿದೆ.
ರಮೇಶ್ ರವರು ಅತ್ಯಂತ ಗೌರವಾದರಗಳಿಂದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದ್ದು ಹಿತಾನುಭವವನ್ನುಂಟುಮಾಡಿತು. ಅವರ ಪುತ್ರನ ವಿವಾಹ ಮಹೋತ್ಸವ ಮಂಗಳಕರವಾಗಿ ನೆರವೇರಲೆಂದು ನಾವೆಲ್ಲ ಹೃದಯತುಂಬಿ ಹಾರೈಸಿದೆವು.

-ಆರ್.ಎಸ್.ಅಯ್ಯರ್, ತುಮಕೂರು, ದಿ. 06-11-2025 #rsiyertumakuru







Guluru Lake - 2025 - ಗೂಳೂರು ಕೆರೆ

 



ಗೂಳೂರಿನ ಗಣಪತಿಯಂತೆಯೇ ಈಗ ಗೂಳೂರು ಕೆರೆಯೂ ಜನಾಕರ್ಷಕ ಸ್ಥಳ. ವಿಶಾಲವಾದ ಕೆರೆ ಇತ್ತೀಚಿನ ಮಳೆಯಿಂದ ಕೋಡಿ ಬಿದ್ದಿದೆ. ಕೋಡಿಯಲ್ಲಿ ನೀರು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ. ಇಡೀ ಕೋಡಿ ಕಟ್ಟೆಯಲ್ಲಿ ಹಾಲು ಉಕ್ಕಿ ಹರಿಯುತ್ತಿದೆಯೇನೋ ಎಂಬಷ್ಟು ರೂಪಾಂತರ. ಆ ನೀರಿನಲ್ಲಿ ಮಿಂದೇಳಲು ಜನವೋ ಜನ. ಯುವಕರು, ಯುವತಿಯರು, ಮಹಿಳೆಯರು, ಪುರುಷರು, ಅಷ್ಟೇ ಅಲ್ಲದೆ ಪುಟಾಣಿ ಕಂದಮ್ಮಗಳನ್ನೂ ಕರೆತರುವ ಪೋಷಕರು- ಹೀಗೆ ಎಲ್ಲರೂ ಆ ಹಾಲ್ನೊರೆಯಂತೆ ಧುಮ್ಮಿಕ್ಕುವ ನೀರಿನಿಂದ ಆಕರ್ಷಿತರಾದವರೇ. ಅದೆಷ್ಟೋ ಹೊತ್ತು ಆ ನೀರಿನಲ್ಲಿ ನೆನೆಯುತ್ತ ಮೈಮರೆಯುವವರೇ. "ನಮ್ಮ ತುಮಕೂರು" ನಗರದ ಪಕ್ಕದಲ್ಲೇ ಇರುವ ಗೂಳೂರು ಕೆರೆಗೆ ಇಂದು (ದಿ. 28-10-2025) ಮಧ್ಯಾಹ್ನ ನಾನು ಮತ್ತು ವಿಶ್ವನಾಥನ್ ತೆರಳಿದ್ದಾಗ ಕಂಡ ಮನಮೋಹಕ ದೃಶ್ಯಗಳಿವು. ವಿಡಿಯೋ ನೋಡಲು ಯೂಟ್ಯೂಬ್ ಲಿಂಕ್ - https://youtube.com/shorts/0goan5w5mK4?si=kyH8BaV1riQL0_py

- ಆರ್.ಎಸ್.ಅಯ್ಯರ್, ತುಮಕೂರು, ದಿ. 28-10-2025 #rsiyertumakuru #Guluru








-------------------------------------------------------------------------------------------------