* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Saturday 24 September 2022

ಕ್ರಿಸ್ಟಲ್ ಕೆರೆ, ಅನುಪನಹಳ್ಳಿ, ತುಮಕೂರು Crystal Lake, Anupanahalli, Tumakuru 20-09-2022

    ತುಮಕೂರು ತಾಲ್ಲೂಕಿನ ದೇವರಾಯನದುರ್ಗದ ಅರಣ್ಯ ಪ್ರದೇಶದಲ್ಲಿದೆ ಈ ಸುಂದರ ಪ್ರಾಕೃತಿಕ ತಾಣ. ದುರ್ಗದಹಳ್ಳಿಯಿಂದ ಮುಂದಕ್ಕೆ ಅನುಪನಹಳ್ಳಿ ಇದೆ. ಆ ಪುಟ್ಟ ಹಳ್ಳಿಯೊಳಗಿಂದ ನಿರ್ಜನ ಪ್ರದೇಶದ ಕಾಲುದಾರಿಯಲ್ಲಿ (ದ್ವಿಚಕ್ರ ವಾಹನದಲ್ಲಿ ತುಂಬ ಕಷ್ಟ ಪಟ್ಟು ಹೋಗಬೇಕು) ಸುಮಾರು ಎರಡು ಕಿ.ಮೀ. ಸಾಗಿದಾಗ  ಈ ತಾಣ ಕಾಣುತ್ತದೆ. ಬೆಟ್ಟ ಗುಡ್ಡಗಳ ಮಧ್ಯೆ ಇರುವ ಈ ಕೆರೆಯನ್ನು "ಕ್ರಿಸ್ಟಲ್ ಕೆರೆ" ಎಂದು ಗುರುತಿಸಲಾಗಿದೆ. ಹಿಂಬದಿ ಮರಳಿನ ಕಾಲುವೆಯೇ ಇದೆ. ಅದರ ಮೇಲೆ ತಿಳಿನೀರು ಹರಿದುಬರುತ್ತದೆ. ಈ ತಾಣದಲ್ಲಿ ಮೌನವೇ ಹೆಪ್ಪುಗಟ್ಟಿದಂತಿರುತ್ತದೆ. ಕೆರೆಯಿಂದ ನೀರು ಕೋಡಿ ಬಿದ್ದು ಹರಿಯುವ ಸದ್ದು ಬಿಟ್ಟರೆ, ಪಕ್ಷಿಗಳ ಕಲರವ ಆಲಿಸಬಹುದು. ನವಿಲುಗಳ ಹಿಂಡು ಕಂಡರೆ ಅದು ಅದೃಷ್ಟ. ಆ ನಿಶ್ಯಬ್ಧ ಪರಿಸರದಲ್ಲಿ ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತ ಕುಳಿತರೆ ಅದೊಂದು ಧ್ಯಾನಸ್ಥ ಸ್ಥಿತಿಯಂತಾಗಿಬಿಡುತ್ತದೆ. 
    ಸರ್ವೋದಯ ಕಾಲೇಜಿನ ಎನ್.ಸಿ.ಸಿ. ಶಿಕ್ಷಕರೂ, ಆತ್ಮೀಯ ಮಿತ್ರರೂ ಆದ ಶ್ರೀ ಪ್ರದೀಪ್ ಕುಮಾರ್ ಅವರು ನೀಡಿದ ಮಾಹಿತಿ ಮೇರೆಗೆ ನಾನು ಮತ್ತು ಆರ್.ವಿಶ್ವನಾಥನ್ ಈ ತಾಣ ನೋಡಿ ಸಂತೋಷಿಸಿದೆವು.
    -ಆರ್.ಎಸ್.ಅಯ್ಯರ್, ತುಮಕೂರು









 



*********************************************



Saturday 10 September 2022

Mydala Lake overflow -2022 ಕೋಡಿ ಬಿದ್ದ ಮೈದಾಳ ಕೆರೆ

 “ಮೈದಾಳ ಕೆರೆ” ತುಂಬಿ ತುಳುಕುತ್ತಿದೆ. ತುಮಕೂರು ತಾಲ್ಲೂಕು ಮೈದಾಳ ಗ್ರಾಮದಲ್ಲಿರುವ ಈ ಕೆರೆಯು, ಜೈನ ಧರ್ಮೀಯರ ಪವಿತ್ರ ಸ್ಥಳವಾದ ಮಂದರಗಿರಿ ಬೆಟ್ಟದ ಹಿಂಬದಿಯಲ್ಲಿ, ಬೆಟ್ಟಗುಡ್ಡಗಳ ರಮ್ಯ ಪರಿಸರದ ನಡುವೆ ಹರಡಿಕೊಂಡಿದೆ. ಕೆರೆಯನ್ನೆಲ್ಲ ವ್ಯಾಪಿಸಿರುವ ಶುದ್ಧ ತಿಳಿನೀರು ಮನೋಹರವಾಗಿದೆ. ಕೆರೆಯಿಂದ ನೀರು ಧುಮ್ಮಿಕ್ಕುತ್ತಿದೆ. ರಭಸವಾಗಿ ನೀರು ಮುನ್ನುಗ್ಗುತ್ತಿರುವ ದೃಶ್ಯ ಮನಸೂರೆಗೊಳ್ಳುತ್ತಿದೆ. ಇಂದು (ದಿ.06-09-2022, ಮಂಗಳವಾರ) ಸಂಜೆ ನಾನು ಮತ್ತು ವಿಶ್ವನಾಥನ್ ತೆರಳಿದ್ದಾಗ, ಹೊತ್ತು ಜಾರಿದ್ದು ಗೊತ್ತೇ ಆಗಲಿಲ್ಲ!

ಇತ್ತೀಚಿನ ಭರ್ಜರಿ ಮಳೆಯಿಂದ ಕೆರೆ ತುಂಬಿ, ಕೋಡಿ ಬಿದ್ದು ನೀರು ಹೊರಕ್ಕೆ ಹರಿಯುತ್ತಿದೆ. ಆ ನೀರು ಕೆಸರಮಡು ರಸ್ತೆ ಮೂಲಕ ಶೆಟ್ಟಿಹಳ್ಳಿ ಕೆರೆಕಟ್ಟೆಯನ್ನು ತುಂಬಿಸಿದೆ. ಅಲ್ಲಿಂದ ಹೊರಹೊಮ್ಮುವ ನೀರು, ಕಾಲುವೆ ಮೂಲಕ ಮರಳೂರು ಕೆರೆಯತ್ತ ಹರಿಯುತ್ತಿದೆ.
ದಶಕಗಳ ಹಿಂದೆ, ಒಂದು ಕಾಲದಲ್ಲಿ ತುಮಕೂರು ನಗರದ ಜನತೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದುದೇ ಇಲ್ಲಿಂದ. ಮೈದಾಳ ಕೆರೆಯಿಂದ ಬೆಳಗುಂಬ ಮಾರ್ಗವಾಗಿ ತುಮಕೂರಿನ ವಿದ್ಯಾನಗರದ ಜಲಸಂಗ್ರಹಾಗಾರಕ್ಕೆ ಬಂದು, ಅಲ್ಲಿನ ಶುದ್ಧೀಕರಣ ಘಟಕದ ಮೂಲಕ ನಗರದಾದ್ಯಂತ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಹೇಮಾವತಿ ನೀರು ಬರಲಾರಂಭಿಸಿದ ಬಳಿಕ ಪ್ರಸ್ತುತ ಈ ನೀರಿನ ಬಳಕೆ ಸೀಮಿತವಾಗಿದೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ.06-09-2022








-------------------------------------------
VIDEOS









Ganeshothsava - 2022 ಗಣೇಶೋತ್ಸವ

 ಶ್ರೀ ಶುಭಕೃತ್ ಸಂವತ್ಸರದ ಶ್ರೀ ಗಣೇಶ ಚತುರ್ಥಿಯ ಪೂಜೆ ಇಂದು (ದಿ.31-08-2022, ಬುಧವಾರ) ಬೆಳಗ್ಗೆ ಸಂಪನ್ನವಾಯಿತು. ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (93) ಅವರು ಮಹಾಮಂಗಳಾರತಿ ನೆರವೇರಿಸಿದರು.








Sri Shivasathya Visit 2022


 ಹೆಸರಾಂತ ಸಂಗೀತ ಸಂಯೋಜಕರಾದ ಬೆಂಗಳೂರಿನ ಶ್ರೀ ಶಿವಕುಮಾರ್ (ಶಿವಸತ್ಯ) ಮತ್ತು ಶ್ರೀಮತಿ ವಿದ್ಯಾ ಶಿವಸತ್ಯ (ನಮ್ಮ ಸಹೋದರಿ) ಅವರು ಇಂದು (ದಿ. 25-08-2022) ನಮ್ಮ ಮನೆಗೆ ಆಗಮಿಸಿ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ಅವರ ಕುಶಲೋಪರಿ ವಿಚಾರಿಸಿದರು. ಅಂತೆಯೇ ಕಳೆದವಾರ ಮತ್ತೋರ್ವ ಸಹೋದರಿ ಶ್ರೀಮತಿ ಗಾಯತ್ರಿ ಸತ್ಯನಾರಾಯಣ ಅವರೂ ಆಗಮಿಸಿದ್ದರು.