* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Wednesday 11 July 2018

with Dr.K.S. Nisar Ahmed (R S Iyer) ಡಾ. ಕೆ.ಎಸ್.ನಿಸಾರ್ ಅಹಮದ್ ಅವರೊಡನೆ...



ಅದೊಂದು ಅವಿಸ್ಮರಣೀಯ ಪ್ರಸಂಗವೇ ಆಗಿಹೋಯಿತು. 
********************************************
ನಾಡಿನ ಸುವಿಖ್ಯಾತ ಕವಿಗಳೂ -“ಜೋಗದ ಸಿರಿ ಬೆಳಕಿನಲ್ಲಿ” ಹಾಡಿನ ಖ್ಯಾತಿಯುಳ್ಳವರೂ ಆದ “ನಾಡೋಜ” ಪ್ರೊ. ಕೆ.ಎಸ್.ನಿಸಾರ್ ಅಹಮದ್ ಅವರನ್ನುನೋಡಿದ್ದು, ಅವರ ಪಕ್ಕ ಕುಳಿತು ಮಾತನಾಡಿದ್ದು, ಬಳಿಕ ಅವರು ವೇದಿಕೆಯಲ್ಲಿತಮ್ಮದೇ ಆದ ಕವನಗಳನ್ನು ಆಕರ್ಷಕವಾಗಿ ವಾಚಿಸಿದ್ದನ್ನು ಆಲಿಸಿದ್ದು, ಲಘುದಾಟಿಯಲ್ಲೇ ಮಾತನಾಡುತ್ತ ವೇದಿಕೆಯಲ್ಲಿದ್ದ ಹಾಗೂ ಸಭೆಯಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸುತ್ತಲೇ ಚಿಂತನೆಗೆ ಹಚ್ಚಿದ ಪರಿಯನ್ನು ಹಾಗೂ 83 ರ ವಯಸ್ಸಿನಲ್ಲೂ ಅವರಲ್ಲಿ ಉಕ್ಕುತ್ತಿದ್ದ ಜೀವನೋತ್ಸಾಹವನ್ನು ಕಂಡಿದ್ದು ನಿಜಕ್ಕೂ ವಿಶಿಷ್ಟ ಅನುಭವವನ್ನೇ ನಮಗುಂಟುಮಾಡಿತು.

ವೇದಿಕೆಯಲ್ಲಿ ಅವರು ಮಾತನಾಡುವಾಗ ಸಭಾಂಗಣದಲ್ಲಿ ಆಸೀನರಾಗಿದ್ದ ಅನೇಕ ಸಹೃದಯರ ಹೆಸರನ್ನು ಉಲ್ಲೇಖಿಸುತ್ತ ಹೋದರು. ಹಾಗೆಯೇ ಥಟ್ಟನೆ “ತುಮಕೂರಿನಿಂದ ಪತ್ರಕರ್ತ ಅಯ್ಯರ್ ಬಂದಿದ್ದಾರೆ’’ ಎಂದು ನನ್ನ ಹೆಸರನ್ನೂಹೇಳಿದೊಡನೆ ನನಗೆ ರೋಮಾಂಚನವಾಯಿತು. ಅವರ ಹೃದಯವೈಶಾಲ್ಯತೆ ಮತ್ತು ಅಗಾಧ ನೆನಪಿನ ಶಕ್ತಿ ಬೆರಗುಗೊಳಿಸಿತು. 

ಅವರ ಪಕ್ಕ ಕುಳಿತು ಮಾತನಾಡುವಾಗ ತುಮಕೂರಿನಲ್ಲಿಸರಸ್ ಫೌಂಡೇಷನ್ ವತಿಯಿಂದ ನಾವು ನಡೆಸುತ್ತಿರುವ “ಡಿವಿಜಿ ನೆನಪು’’ ಮಾಸಿಕ ಉಪನ್ಯಾಸ ಕಾರ್ಯಕ್ರಮದ ಬಗ್ಗೆ ತಿಳಿಸುತ್ತ, “ಇದೀಗ 70 ನೇ ತಿಂಗಳಿಗೆ ಪದಾರ್ಪಣೆ ಮಾಡುತ್ತಿದೆ. ತಾವೂ ಒಮ್ಮೆ ಅತಿಥಿಗಳಾಗಿ ದಯಮಾಡಿಸಬೇಕು” ಎಂದಾಗ “ಏನು 70 ತಿಂಗಳುಗಳಿಂದ ನಡೆಯುತ್ತಿದೆಯೇ?’’ ಎಂದು ಮೆಚ್ಚುಗೆ ಮತ್ತು ಅಚ್ಚರಿಯಿಂದ ಉದ್ಗರಿಸಿದರು. “ಡಿವಿಜಿ ಬಹು ದೊಡ್ಡ ವ್ಯಕ್ತಿ’’ ಎನ್ನುತ್ತ, “ಒಂದೆರಡು ತಿಂಗಳು ಕಳೆಯಲಿ. ನಾನೂ ಬರುತ್ತೇನೆ’’ ಎಂದು ಸಂತೋಷದಿಂದ ಭರವಸೆಕೊಟ್ಟರು.

ಇಂಥದ್ದೊಂದು ಅವಿಸ್ಮರಣೀಯ ಅನುಭವ ದಿನಾಂಕ 08-07-2018, ಭಾನುವಾರ ಬೆಳಗ್ಗೆ ಬೆಂಗಳೂರಿನ “ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್”ನಲ್ಲಿ ಡಾ.ಪು.ತಿ.ನ. ಟ್ರಸ್ಟ್ ವತಿಯಿಂದ ಏರ್ಪಟ್ಟಿದ್ದ “ಪು.ತಿ.ನರಸಿಂಹಾಚಾರ್ ಅವರಿಗೆ ಕಾವ್ಯನಮನ-2” ಕಾರ್ಯಕ್ರಮದಲ್ಲಿ ನಮಗಾಯಿತು.






No comments:

Post a Comment