hsv

"ದುಃಖ ತಾನಾಗಿಯೇ ಬರುತ್ತದೆ. ಆದರೆ ಸಂತೋಷದ ಕ್ಷಣಗಳು ಹಾಗಲ್ಲ. ಅದನ್ನು ನಾವು ಸೃಷ್ಟಿ ಮಾಡಬೇಕಾಗುತ್ತದೆ." - ಕವಿ ಡಾ. ಹೆಚ್.ಎಸ್.ವೆಂಕಟೇಶ ಮೂರ್ತಿ

Wednesday, 4 December 2024

Hole Anjaneya & Vaidyanatheshwara Temple, Madduru- ಮದ್ದೂರು- 30-11-2024

ಮದ್ದೂರಿನಲ್ಲೊಂದು ಸುತ್ತು….
--------------------------
ಗೌಡಗೆರೆ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ವೀಕ್ಷಣೆ ಬಳಿಕ ಪಕ್ಕದ ಮದ್ದೂರು ಪಟ್ಟಣಕ್ಕೆ ನಾನು ಮತ್ತು ಬಿ.ಎಸ್. ವೆಂಕಟೇಶ್ ( ದಿ.30-11-2024) ತೆರಳಿದೆವು. ಗೌಡಗೆರೆಯು ರಾಮನಗರ ಜಿಲ್ಲೆ ಚೆನ್ನಪಟ್ಟಣ ತಾಲ್ಲೂಕಿಗೆ ಸೇರಿದ್ದರೆ, ಮದ್ದೂರು ತಾಲ್ಲೂಕು ಮಂಡ್ಯ ಜಿಲ್ಲೆಗೆ ಸೇರಿದೆ.
ಮದ್ದೂರಿನ ಮುಖ್ಯರಸ್ತೆ ಪಕ್ಕದ ಕ್ರಾಸ್ ನಲ್ಲಿ ಶಿಂಶಾ ನದಿ ದಂಡೆಯಲ್ಲಿರುವ ಸುಪ್ರಸಿದ್ಧ ಹಾಗೂ ಪುರಾತನವಾದ, ಮುಜರಾಯಿ ಇಲಾಖೆಗೆ ಸೇರಿರುವ ಶ್ರೀ ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಹೋದಾಗ ಮಧ್ಯಾಹ್ನ 1-30 ದಾಟಿತ್ತು. ಆದರೂ ಜನಜಂಗುಳಿ ಇತ್ತು. ಪ್ರಶಾಂತ ಪರಿಸರದಲ್ಲಿ ದೇವರ ದರ್ಶನ ಆಯಿತು. ಪ್ರಸಾದ ಸ್ವೀಕರಿಸಿದೆವು. ಪಕ್ಕದಲ್ಲೇ ಖಾಸಗಿಯವರಿಗೆ ಸೇರಿದ ಶ್ರೀ ಶ್ರೀನಿವಾಸ ದೇವಾಲಯವಿದ್ದು ಅದನ್ನೂ ವೀಕ್ಷಿಸಿದೆವು. ಅಲ್ಲಿ ಗೋಶಾಲೆಯೂ ಇದೆ. ಬಳಿಕ ಅಲ್ಲಿಂದ ಸುಮಾರು 2 ಕಿ.ಮೀ. ಅಂತರದಲ್ಲಿರುವ ಪುರಾತನ ಹಾಗೂ ಸುಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯಕ್ಕೆ ಹೋದೆವು. ಆದರೆ ಆ ಹೊತ್ತಿಗೆ ದೇವಾಲಯದ ಬಾಗಿಲು ಮುಚ್ಚಿತ್ತು. ಇದೂ ಸಹ ಮುಜರಾಯಿ ಇಲಾಖೆಯದ್ದು. ಹೊರಗಿಂದಲೇ ಅನೇಕ ಭಕ್ತರು ದೇವರಿಗೆ ನಮಿಸುತ್ತಿದ್ದರು. ಈ ದೇವಾಲಯವೂ ಶಿಂಶಾ ನದಿಯ ದಂಡೆಯಲ್ಲಿದ್ದು, ಭಕ್ತರು ನದಿಗೂ ಪೂಜಿಸುತ್ತಾರೆ. ಇದರ ಪಕ್ಕದಲ್ಲೇ ಖಾಸಗಿ ಟ್ರಸ್ಟ್ ಒಂದು ದಾಸೋಹ ಭವನ ನಿರ್ಮಿಸಿಕೊಂಡು ನಿತ್ಯ ದಾಸೋಹ ವ್ಯವಸ್ಥೆ ಮಾಡಿದೆ. ಅಲ್ಲಿ ಮಧ್ಯಾಹ್ನ 3 ಗಂಟೆಯವರೆಗೂ ಅನ್ನ ದಾಸೋಹ (ಅನ್ನ, ಸಾರು, ಮಜ್ಜಿಗೆ ಮತ್ತು ಪಾಯಸ) ನಡೆಯುತ್ತದೆ. ನಾವು ದೇವಾಲಯದ ಆವರಣದಲ್ಲಿದ್ದಾಗ ನಮ್ಮನ್ನು ಟ್ರಸ್ಟ್ ಸಿಬ್ಬಂದಿ ಪ್ರಸಾದ ಸ್ವೀಕರಿಸಲು ಆಹ್ವಾನಿಸಿದರು. ಅಲ್ಲೇ ನಾವು ಪ್ರಸಾದ ಸ್ವೀಕರಿಸಿದೆವು. ಅಚ್ಚುಕಟ್ಟಾದ ಕಟ್ಟಡಗಳು, ಅಚ್ಚುಕಟ್ಟಾದ ಊಟದ ವ್ಯವಸ್ಥೆ ಗಮನ ಸೆಳೆದವು.
ಊಟ ಮುಗಿಸಿ ಹೊರಟಾಗ ಮದ್ದೂರಿನ ಪತ್ರಕರ್ತ ಮಿತ್ರರಾದ ಶ್ರೀ ಕೆ.ಎನ್.ಪುಟ್ಟಲಿಂಗಯ್ಯನವರ ಭೇಟಿ ಆಯಿತು. ಇವರು ನನಗೆ ಸುಮಾರು 20-22 ವರ್ಷಗಳಿಗೂ ಹಿಂದಿನ ಪರಿಚಯ. ಆಗ ಇವರು ತುಮಕೂರಿನಲ್ಲಿ “ವಿಜಯಕರ್ನಾಟಕ”ದ ಜಿಲ್ಲಾ ವರದಿಗಾರರಾಗಿದ್ದರು. ದಶಕದ ಹಿಂದೆ ತುಮಕೂರಿಗೆ ಮತ್ತೆ ಬಂದ ಇವರು, “ತುಮಕೂರು ವಾರ್ತೆ” ಜಿಲ್ಲಾ ಪತ್ರಿಕೆಯ ಸಂಪಾದಕರಾದರು. ಬಳಿಕ ಅದರ ಪ್ರಕಾಶಕರೂ ಆದರು. ಕೆಲವರ್ಷಗಳ ಬಳಿಕ “ತುಮಕೂರು ವಾರ್ತೆ”ಯನ್ನು ಮತ್ತೊಬ್ಬರಿಗೆ ಹಸ್ತಾಂತರಿಸಿದರು. ಇವರು ಮಂಡ್ಯದಲ್ಲಿ ಅದಾಗಲೇ ಅಸ್ತಿತ್ವದಲ್ಲಿದ್ದ “ಉದಯಕಾಲ” ಎಂಬ ದಿನಪತ್ರಿಕೆಯ ಸಂಪಾದಕರಾಗಿ ಅದರ ತುಮಕೂರು ಆವೃತ್ತಿಯನ್ನು ಹೊರತಂದರು. ಸ್ವಲ್ಪ ಕಾಲದಲ್ಲೇ ಅದನ್ನು ರಾಜ್ಯ ಮಟ್ಟದ ಪತ್ರಿಕೆಯಾಗಿ ಉನ್ನತೀಕರಿಸಿದ್ದು, ಇದೀಗ “ಉದಯಕಾಲ” ದಿನಪತ್ರಿಕೆಯ ಸಂಪಾದಕರಾಗಿ ಶ್ರೀ ಪುಟ್ಟಲಿಂಗಯ್ಯರವರು ತಮ್ಮದೇ ಛಾಪು ಮೂಡಿಸಿದ್ದಾರೆ. ತಮ್ಮ ಕಾರ್ಯಕ್ಷೇತ್ರವನ್ನು ಕೆಲವರ್ಷಗಳ ಹಿಂದೆಯಷ್ಟೇ ತುಮಕೂರಿನಿಂದ ತಮ್ಮ ಸ್ವಂತ ತಾಲ್ಲೂಕಾದ ಮದ್ದೂರು ಪಟ್ಟಣಕ್ಕೆ ಸ್ಥಳಾಂತರಿಸಿಕೊಂಡಿದ್ದಾರೆ.
ಶ್ರೀ ಪುಟ್ಟಲಿಂಗಯ್ಯನವರ ಭೇಟಿ ಮತ್ತು ಮಾತುಕತೆ ಸಂತೋಷವನ್ನುಂಟುಮಾಡಿತು. ಬಳಿಕ ಅವರು ಮದ್ದೂರಿನ ಶ್ರೀ ನರಸಿಂಹಸ್ವಾಮಿ ದೇವಾಲಯ ನೋಡಲೇಬೇಕು ಎಂದು ನಮ್ಮನ್ನು ಊರೊಳಗಿರುವ ದೇಗುಲಕ್ಕೆ ಕರೆದೊಯ್ದರು. ಆಗ ವೇಳೆ ಮಧ್ಯಾಹ್ನ 3 ಗಂಟೆ ಆಗುತ್ತಿತ್ತು. ದೇವಾಲಯ ಮುಚ್ಚುವ ಹೊತ್ತು. ಆದರೂ ನಮಗೆ ದೇವರ ದರ್ಶನವಾಯಿತು. ಪ್ರಸಾದವೂ ಲಭಿಸಿತು. ಇಲ್ಲಿರುವ ದೇವರು ಉಗ್ರನರಸಿಂಹಸ್ವಾಮಿ. ಹಿರಣ್ಯಕಶಿಪುವಿನ ಹೊಟ್ಟೆಯನ್ನು ಬಗೆಯುತ್ತಿರುವ ಉಗ್ರ ಸ್ವರೂಪಿ ನರಸಿಂಹನ ಅಪರೂಪದ ವಿಗ್ರಹವಿರುವುದು ಇಲ್ಲಿನ ವಿಶೇಷ. ಪುರಾಣ ಪ್ರಸಿದ್ಧವಾದ ಈ ಬೃಹತ್ ದೇವಾಲಯವು ಪ್ರಾಚ್ಯವಸ್ತು ಇಲಾಖೆಗೆ ಸೇರಿದೆ. ಪಕ್ಕದಲ್ಲೇ ಸುಪ್ರಸಿದ್ಧ ಶ್ರೀ ವರದರಾಜಸ್ವಾಮಿ ದೇವಾಲಯ ಹಾಗೂ ಶ್ರೀ ಪಟ್ಟಾಭಿರಾಮ ದೇವಾಲಯವಿದ್ದು, ಆ ಹೊತ್ತಿಗೆ ದೇವಾಲಯದ ವೇಳೆ ಮುಗಿದು ಬಾಗಿಲು ಹಾಕಲ್ಪಟ್ಟಿದ್ದವು. ಹೊರಗಿನಿಂದಲೇ ನೋಡಿ, ನಮಿಸಿದೆವು. ಶ್ರೀ ಪುಟ್ಟಲಿಂಗಯ್ಯನವರಿಂದ ಬೀಳ್ಕೊಂಡು, ಮಧ್ಯಾಹ್ನ 3-15 ಕ್ಕೆ ಅಲ್ಲಿಂದ ಹೊರಟೆವು. ಸಂಜೆ 4-45 ರ ಹೊತ್ತಿಗೆ ತುಮಕೂರಿನಲ್ಲಿದ್ದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 01-12-2024, #rsiyertumakuru







------------------------------------------ VIDEO----------------------------------------
 




Monday, 2 December 2024

Gowdagere - 30-11-2024- ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಕ್ಷೇತ್ರ

ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ...
---------------------------



ಇದ್ದಕ್ಕಿದ್ದಂತೆ ಇಂದು (ದಿ.30-11-2024) ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡುವ ಅವಕಾಶ ದೊರೆಯಿತು. ಗೌಡಗೆರೆಯು ನಮ್ಮ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗದ ಗಡಿಯಂಚಿನಲ್ಲಿ ಇದ್ದರೂ, ಇದು ಪಕ್ಕದ ರಾಮನಗರ ಜಿಲ್ಲೆ ಚೆನ್ನಪಟ್ಟಣ ತಾಲ್ಲೂಕಿಗೆ ಸೇರುತ್ತದೆ. ಮಿತ್ರರಾದ ಹಾಗೂ ಈ ಕ್ಷೇತ್ರದಲ್ಲಿ ಸುಪರಿಚಿತರಾಗಿರುವ ಶ್ರೀ ಬಿ.ಎಸ್.ವೆಂಕಟೇಶ್ (ಬೆಳಗುಂಬ) ರವರು ನಿನ್ನೆ ಭೇಟಿಯಾದಾಗ "ನಾಳೆ ಬೆಳಿಗ್ಗೆ ಹೋಗೋಣ ಬನ್ನಿ" ಎಂದು ಆಹ್ವಾನಿಸಿದರು. ಅಲ್ಲಿಗೆ ಹೋಗಬೇಕೆಂಬ ಬಹುಕಾಲದ ನನ್ನ ಅಪೇಕ್ಷೆ ಹೀಗೆ ಅನಿರೀಕ್ಷಿತವಾಗಿ ಈಡೇರಲಿದೆಯೆಂದರೆ ಇಲ್ಲ ಎನ್ನಲಾದೀತೇ? ತಕ್ಷಣವೇ ಒಪ್ಪಿದೆ. ಇಂದು ಅವರೊಂದಿಗೆ ಹೋಗಿಬಂದೆ.
ಗೌಡಗೆರೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಭವ್ಯ ದೇಗುಲವಿದೆ. ಬಸವಣ್ಣನಿಗೂ ಪ್ರಖ್ಯಾತಿ ಹೊಂದಿದೆ. ದೇಗುಲದ ಪಾರ್ಶ್ವದಲ್ಲೇ ಭವ್ಯ ಹಾಗೂ ದಿವ್ಯವಾದ ಶ್ರೀ ಚಾಮುಂಡೇಶ್ವರಿ ವಿಗ್ರಹವಿದೆ. ಸುಮಾರು 20 ಅಡಿಗಳಷ್ಟು ಎತ್ತರದ ಪೀಠದ ಮೇಲೆ ಇದನ್ನು ಪಂಚಲೋಹದಿಂದ ನಿರ್ಮಿಸಲಾಗಿದೆ. 18 ಕೈಗಳುಳ್ಳ ದೇವಿಯ ವಿಗ್ರಹವೇ ಸುಮಾರು 40 ಅಡಿಗಳಷ್ಟು ಎತ್ತರವಿದೆ. ದೇವಿಯ ಹಿಂಬದಿ ಬೃಹತ್ ಸಿಂಹವಿದೆ. ಹಿನ್ನೆಲೆಯಲ್ಲಿ ನೆಲದಿಂದ ಸುಮಾರು 112 ಅಡಿಗಳಷ್ಟು ಎತ್ತರ ಬರುವಷ್ಟು ಪರ್ವತವನ್ನು ಹಾಗೂ ಜಲಪಾತವನ್ನು ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ದೇವಿಯ ಇಕ್ಕೆಲಗಳಲ್ಲಿ ಜಿಂಕೆ, ಸಿಂಹ, ಹುಲಿ ಮೊದಲಾದ ಪ್ರಾಣಿಗಳ ಆಕೃತಿಗಳನ್ನು ನಿರ್ಮಿಸಲಾಗಿದೆ. ಅಂದರೆ ಪ್ರಕೃತಿಯ ನಡುವೆ ಪಂಚಲೋಹದಿಂದ ಕೂಡಿದ ದೇವಿಯ ವಿಗ್ರಹ ವಿಜೃಂಭಿಸುತ್ತಿದೆ. 2021 ರ ಆಗಸ್ಟ್ 8 ರಂದು ಈ ವಿಗ್ರಹ ಲೋಕಾರ್ಪಣೆಗೊಂಡಿದೆ. ಅಂದಿನಿಂದ ಪ್ರತಿನಿತ್ಯ ರಾಜ್ಯ ಹಾಗೂ ಹೊರರಾಜ್ಯಗಳ ಸಹಸ್ರಾರು ಭಕ್ತಾದಿಗಳನ್ನು ಈ ಕ್ಷೇತ್ರ ಆಕರ್ಷಿಸುತ್ತಿದೆ.
ಈ ಬೃಹತ್ ವಿಗ್ರಹವು ಹೊರಭಾಗದಲ್ಲಿದ್ದರೆ, ನೆಲ ಅಂತಸ್ತಿನಲ್ಲಿ ಒಳಭಾಗಕ್ಕೆ ಅದ್ಭುತವಾದ ಮ್ಯೂಸಿಯಂ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ 50 ರೂ. ಪ್ರವೇಶ ಶುಲ್ಕವಿದೆ. ಒಳಹೊಕ್ಕು ಹೊರಬರುವಷ್ಟರಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ರಾಷ್ಟ್ರೀಯ ಹಾಗೂ ಗ್ರಾಮೀಣ ಪರಿಸರದ ಬಹುಮುಖ ವ್ಯಕ್ತಿತ್ವಗಳನ್ನು / ಜನಜೀವನವನ್ನು ಪರಿಚಯಿಸುವ ಶಿಲ್ಪಕಲಾಕೃತಿಗಳು ಮನಸೂರೆಗೊಳ್ಳುತ್ತವೆ. ಈ ಮ್ಯೂಸಿಯಂ ಅನ್ನು ಈಗ ಇನ್ನೊಂದು ಹಂತಕ್ಕೆ ವಿಸ್ತರಿಸಿದ್ದು, ಅಲ್ಲಿ ನವದುರ್ಗೆಯರ ದೊಡ್ಡದೊಡ್ಡ ವಿಗ್ರಹಗಳು ರಾರಾಜಿಸುತ್ತಿವೆ.
ಪಕ್ಕದಲ್ಲೇ ದಾಸೋಹ ಭವನವಿದೆ. ಒಮ್ಮೆಲೆ ಒಂದು ಸಾವಿರ ಜನರು ಕುಳಿತು ಪ್ರಸಾದ ಸ್ವೀಕರಿಸಬಹುದು. ಬೆಳಗ್ಗೆ ಉಪಹಾರ ಹಾಗೂ ಬೆಳಗ್ಗೆ 11 ಗಂಟೆಯ ನಂತರ ರಾತ್ರಿಯತನಕ ನಿರಂತರವಾಗಿ ಭೋಜನ (ಅನ್ನ, ಸಾರು, ಮಜ್ಜಿಗೆ, ಪಾಯಸ) ವಿತರಿಸಲಾಗುತ್ತಿರುತ್ತದೆ. ಸಾವಿರಾರು ಭಕ್ತಾದಿಗಳು ಇಲ್ಲಿ ಪ್ರಸಾದ ಸ್ವೀಕರಿಸುತ್ತಿರುತ್ತಾರೆ.
ಇಂತಹುದೊಂದು ಕ್ಷೇತ್ರದ ರೂವಾರಿಗಳೂ, ಧರ್ಮದರ್ಶಿಗಳೂ ಆಗಿರುವ ಶ್ರೀ ಮಲ್ಲೇಶ್ ರವರನ್ನು ಭೇಟಿ ಮಾಡುವ ಸದವಕಾಶವನ್ನೂ ಶ್ರೀ ಬಿ.ಎಸ್.ವೆಂಕಟೇಶ್ ರವರು ಕಲ್ಪಿಸಿದರು. ಅತ್ಯಂತ ಸರಳ ವ್ಯಕ್ತಿತ್ವದ ಶ್ರೀ ಮಲ್ಲೇಶ್ ರವರು ಅತ್ಯಂತ ಪ್ರೀತಿಯಿಂದ ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ನನ್ನೊಡನೆ ಮಾತನಾಡಿದರು. ಈ ಕ್ಷೇತ್ರ ಪ್ರಾರಂಭವಾದ ಬಗೆ, ಕೇದಾರನಾಥದಲ್ಲಿ ಅಘೋರಿಯೊಬ್ಬರು ದೇವಿ ವಿಗ್ರಹ ಸ್ಥಾಪಿಸುವಂತೆ ನೀಡಿದ ಸಲಹೆ, ಆನಂತರ ಅದಕ್ಕಾಗಿ ಪಟ್ಟ ಶ್ರಮ, ಇಲ್ಲಿಗೇ ಅಘೋರಿಗಳು ಬಂದಿದ್ದಾಗ ಪಂಚಲೋಹದಲ್ಲೇ ವಿಗ್ರಹ ಸ್ಥಾಪಿಸುವಂತೆ ನೀಡಿದ ಸೂಚನೆ, ಆನಂತರ ಅದರ ಅನುಷ್ಠಾನ, ಕೊನೆಗೆ 2021 ರ ಆಗಸ್ಟ್ 8 ರಂದು ದೇವಿಯ ಬೃಹತ್ ವಿಗ್ರಹ ಲೋಕಾರ್ಪಣೆಗೊಂಡ ಸಂದರ್ಭದವರೆಗೆ ಎಲ್ಲವನ್ನೂ ಸುದೀರ್ಘವಾಗಿ ವಿವರಿಸಿದರು. ಪ್ರಸಾದ ನಿಲಯಕ್ಕೆ ನಮ್ಮನ್ನು ಕರೆದೊಯ್ದು ಅಲ್ಲಿನ ವ್ಯವಸ್ಥೆಯನ್ನು ವಿವರಿಸಿದರು. ಈಗ ಮ್ಯೂಸಿಯಂನಲ್ಲಿ ಸಿದ್ಧಗೊಳ್ಳುತ್ತಿರುವ ನವದುರ್ಗೆಯರ ವಿಗ್ರಹಗಳ ವಿಭಾಗಕ್ಕೂ ಕರೆದೊಯ್ದು ವಿವರಿಸಿದರು. ಅವರ ಈ ಎಲ್ಲ ಸಾಧನೆ ಬೆರಗುಗೊಳಿಸಿತು. ಎಲ್ಲರಿಂದಲೂ ಗುರೂಜಿಯೆಂದು ಗೌರವಿಸಲ್ಪಡುತ್ತಿರುವ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದೆ. ಹೊರಡುವ ಮುನ್ನ ಶ್ರೀ ಮಲ್ಲೇಶ್ ರವರು ನನಗೂ ಕಿರು ಶಾಲು ಹೊದಿಸಿ, ದೇವಿಯ ಭಾವಚಿತ್ರದ ಫೋಟೋ ನೀಡಿ ಗೌರವಿಸಿದರು. ಅತ್ಯಂತ ಸಂತೋಷವಾಯಿತು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 30-11-2024, #rsiyertumakuru






********************************** VIDEO **********************








Friday, 4 October 2024

Kali Maa Statue- 2024- ಕಾಳಿ ಪ್ರತಿಮೆ ತಂಗನಹಳ್ಳಿ

 ಕಾಳಿ ಮಾತೆಯ ಈ ಆಕರ್ಷಕ ವಿಗ್ರಹದ ದರ್ಶನ ಶರನ್ನವರಾತ್ರಿಯ ಮೊದಲ ದಿನವಾದ ಇಂದು (03-10-2024, ಗುರುವಾರ) ನಮಗಾಯಿತು. ನಾನು ಮತ್ತು ಆರ್.ವಿಶ್ವನಾಥನ್ ಇಂದು ತಂಗನಹಳ್ಳಿ ಕೆರೆಯ ಬಳಿ ಹೋಗಿದ್ದಾಗ ಕೆರೆಯ ಕೋಡಿ ಹತ್ತಿರ ರಸ್ತೆ ಬದಿಯಲ್ಲೇ ಬಂಡೆಯೊಂದರ ಮೇಲೆ ನಿರ್ಮಿಸಿರುವ ಈ ಕಾಳಿ ಮಾತೆಯ ಬೃಹತ್ ವಿಗ್ರಹ ಗಮನಸೆಳೆಯಿತು. ಇದೇ ಮೊದಲ ಬಾರಿಗೆ ಕಾಳಿಯ ಇಂತಹುದೊಂದು ವಿಗ್ರಹವನ್ನು ಈ ಭಾಗದಲ್ಲಿ ನೋಡಿ ನಮಗೆ ಆನಂದಾಶ್ಚರ್ಯಗಳಾದವು.

ಸುಮಾರು ಮೂರು ಅಡಿಗಳಷ್ಟು ಎತ್ತರದ ಪೀಠದ ಮೇಲೆ ಏಳು ಅಡಿ ಎತ್ತರದ ಕಾಳಿ ಮಾತೆಯ ವಿಗ್ರಹವನ್ನು ಸುಂದರವಾಗಿ ನಿರ್ಮಿಸಲಾಗಿದೆ. ದೇವಿಯ ಎದುರುಬದಿ ದೊಡ್ಡದಾದ ತ್ರಿಶೂಲವಿದೆ. ಬಂಡೆಗಲ್ಲಿನ ಮೇಲೆ ಈ ವಿಗ್ರಹವಿದೆ. ಹಿಂಬದಿ ತಂಗನಹಳ್ಳಿ ಕೆರೆಯ ವಿಹಂಗಮ ನೋಟವಿದೆ. ಖಾಸಗಿ ವ್ಯಕ್ತಿಯೊಬ್ಬರು ತಮಿಳುನಾಡಿನ ಶಿಲ್ಪಿಗಳನ್ನು ಕರೆಸಿ ಅವರಿಂದ ಈ ವಿಗ್ರಹವನ್ನು ಕೆಲ ವರ್ಷಗಳ ಹಿಂದೆ ನಿರ್ಮಿಸಿದ್ದಾರೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 03-10-2024, #rsiyertumakuru





Tanganahalli Lake- 2024- ತಂಗನಹಳ್ಳಿ ಕೆರೆ ಕೋಡಿ ದೃಶ್ಯ

 ತಂಗನಹಳ್ಳಿ ಕೆರೆ ಕೋಡಿ ಬಿದ್ದಿದೆ. ಹಾಲ್ನೊರೆಯಂಥ ನೀರು ಕೆರೆಯ ಕೋಡಿಯಿಂದ ಹೊರಹೊಮ್ಮಿ ಧೋ ಎಂದು ಸದ್ದು ಮಾಡುತ್ತ ಹರಿಯುತ್ತಿದೆ. ನಾನು ಮತ್ತು ಆರ್. ವಿಶ್ವನಾಥನ್ ಬೈಕ್ ನಲ್ಲಿ ಇಂದು (ದಿ. 03-10-2024, ಗುರುವಾರ) ಮಧ್ಯಾಹ್ನ ಈ ದಾರಿಯಲ್ಲಿ ಹೋಗುವಾಗ, ಧೋ ಎಂಬ ನೀರಿನ ಹರಿವಿನ ಸದ್ದು ಕೇಳಿ ಕುತೂಹಲದಿಂದ ಬಂಡೆಗಳ ಮಧ್ಯೆ ಒಳಹೊಕ್ಕುನೋಡಿದಾಗ ಕಂಡ ಈ ದೃಶ್ಯ ಮನಮೋಹಕವಾಗಿತ್ತು. ಮೈಮರೆಸುವಂತಿತ್ತು. ನಿನ್ನೆ ರಾತ್ರಿಯಿಡೀ ಸುರಿದ ಭರ್ಜರಿ ಮಳೆಯಿಂದ ಈ ಕೆರೆ ಇಂದು ಬೆಳಗ್ಗೆ ಕೋಡಿ ಬಿದ್ದಿದೆ.

ತಂಗನಹಳ್ಳಿ ಕೆರೆಯು ದೇವರಾಯನದುರ್ಗದ ತಪ್ಪಲಿನಲ್ಲೇ ಇದೆ. ಆದರೆ ಇದು ಕೊರಟಗೆರೆ ತಾಲ್ಲೂಕಿಗೆ ಸೇರುತ್ತದೆ. ದುರ್ಗದ ಹಳ್ಳಿ ಮೂಲಕ ಅನುಪನಹಳ್ಳಿ ಮಾರ್ಗವಾಗಿ ಹೋಗುವಾಗ ಎಡಕ್ಕೆ ತಿರುಗಿ ಆ ದಾರಿಯಲ್ಲಿ ನೇರ ಹೋಗುವಾಗ ತಂಗನಹಳ್ಳಿ ಸಿಗುತ್ತದೆ. ಹಾಗೆಯೇ ಮುಂದೆ ಸಾಗಿದರೆ ದಾರಿಯ ಬಲಬದಿಯಲ್ಲಿ ರಸ್ತೆಯಿಂದ ಒಳಭಾಗದಲ್ಲಿ ಈ ಕೆರೆ ಕಾಣುತ್ತದೆ. ವಾತಾವರಣ ಸುಂದರವಾಗಿದೆ.
- ಆರ್.ಎಸ್.ಅಯ್ಯರ್, ತುಮಕೂರು, ದಿ. 03-10-2024, #rsiyertumakuru








Sunday, 29 September 2024

ಮರಿಮಗನೊಡನೆ ಮುತ್ತಜ್ಜ- Vivek- 2024- VSR with great grand son

 “ಹೊಸ ಚಿಗುರು ಹಳೆಬೇರು ಕೂಡಿರಲು ಮರಸೊಬಗು….”

-------------------------------------
ಈಗಷ್ಟೇ ಮೂರು ತಿಂಗಳು ತುಂಬಿದ ಮರಿಮಗನನ್ನು ಕಂಡು 95 ರ ಮುತ್ತಜ್ಜ ಆನಂದಿಸಿದರು.
ನಮ್ಮ ಸಹೋದರಿ ಶ್ರೀಮತಿ ಆರ್. ರಾಜೇಶ್ವರಿ- ಶ್ರೀ ಹೆಚ್.ಕೆ.ವೇಣುಗೋಪಾಲ್ ದಂಪತಿಯ ಪುತ್ರ ಇಂಜಿನಿಯರ್ ವಿ.ವಿವೇಕ್ ಮತ್ತು ಇಂಜಿನಿಯರ್ ಶ್ರೀಮತಿ ರಶ್ಮಿ ದಂಪತಿ ಇಂದು (ದಿ. 29-09-2024, ಭಾನುವಾರ) ಸಂಜೆ ತಮ್ಮ ಮೂರು ತಿಂಗಳ ಗಂಡು ಮಗುವಿನೊಂದಿಗೆ ನಮ್ಮ ಮನೆಗೆ ಆಗಮಿಸಿದ್ದರು. ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (95) ಅವರಿಗೆ ಮಗುವನ್ನು ತೋರಿಸಿ, ಆಶೀರ್ವಾದ ಪಡೆದುಕೊಂಡರು. ಆಗ ಮಗುವನ್ನು ಮುತ್ತಜ್ಜ ತಮ್ಮ ತೊಡೆಯ ಮೇಲೆ ಕೂರಿಸಿಕೊಂಡರು. ಕೈಕಾಲು ಆಡಿಸುತ್ತ ಆಟವಾಡುತ್ತಿದ್ದ ಮರಿಮಗನನ್ನು ನೋಡುತ್ತ, ಮರಿಮಗನ ನಸುನಗು ಹಾಗೂ ಜೋರು ದನಿಯ ಅಳು ಕೇಳುತ್ತ ಮುತ್ತಜ್ಜ ಮೈಮರೆತರು. ಅದನ್ನು ನೋಡುತ್ತ ನಾವುಗಳೂ ಸಂತೋಷಪಟ್ಟೆವು. ನಾನು ಮತ್ತು ವಿಶ್ವನಾಥನ್ ಇದ್ದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 29-09-2024







Tuesday, 17 September 2024

Bhimanakatte Swamiji- ದಿ. 17-09-2024, ಮಂಗಳವಾರ - ಭೀಮನಕಟ್ಟೆ ಶ್ರೀಗಳೊಂದಿಗೆ






“ಎಲ್ಲರನ್ನೂ ತಿದ್ದುವುದು ಸಾಧ್ಯವಾಗದು; ಆದರೆ ನಮ್ಮ ಮಟ್ಟಿಗೆ ನಾವು ಖಂಡಿತ ಶುದ್ಧರಾಗಿರಬಹುದು…”

-ಶ್ರೀ ಭೀಮನಕಟ್ಟೆ ಮಠದ ಪೀಠಾಧಿಪತಿಗಳಾಗಿರುವ ಪ.ಪೂ. ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು ಈ ಮಾತುಗಳನ್ನು ಹೇಳುವಾಗ ಆ ಮಾತುಗಳಲ್ಲಿ ಹೃತ್ಪೂರ್ವಕತೆ ತುಂಬಿತ್ತು.
“ಚಾತುರ್ಮಾಸ್ಯ ವ್ರತ” ಮುಗಿಸಿ ನಾಳೆ (ದಿ.18-09-2024) ತುಮಕೂರಿನಿಂದ ತೆರಳಲಿರುವ ಹಿನ್ನೆಲೆಯಲ್ಲಿ ಶ್ರೀಗಳ ದರ್ಶನಾಶೀರ್ವಾದ ಪಡೆಯುವ ಸಲುವಾಗಿ ಇಂದು (ದಿ.17-09-2024) ಸಾಯಂಕಾಲ ನಾನು ಮತ್ತು ವಿಶ್ವನಾಥನ್ ತುಮಕೂರಿನ ಶ್ರೀಕೃಷ್ಣಮಂದಿರದಲ್ಲಿ ಶ್ರೀಗಳನ್ನು ಅವರ ಕೊಠಡಿಯಲ್ಲಿ ಭೇಟಿ ಮಾಡಿದೆವು. ಆಗ ಶ್ರೀಗಳು ತುಂಬು ವಿಶ್ವಾಸದಿಂದ ಮಾತನಾಡಿದರು.
ದೇಶ-ಸಮಾಜದ ಪರಿಸ್ಥಿತಿ, ಧರ್ಮ-ಸಂಸ್ಕೃತಿ, ಜನರ ನಡೆ-ನುಡಿ ಹೀಗೆ ಅನೇಕ ವಿಚಾರಗಳ ಬಗ್ಗೆ ಶ್ರೀಗಳು ಸುಮಾರು ಅರ್ಧತಾಸು ಮುಕ್ತಕಂಠದಿಂದ ಚರ್ಚಿಸಿದರು. ಅವರ ಪ್ರತಿ ಮಾತಲ್ಲೂ ಅಪಾರ ಕಳಕಳಿಯಿತ್ತು. ಮಾತಿನ ಕೊನೆಯಲ್ಲಿ ಶ್ರೀಗಳು ನುಡಿದದ್ದು- “ನೋಡಿ, ಸಮಾಜದ ಎಲ್ಲರನ್ನೂ ಸಂಪೂರ್ಣವಾಗಿ ತಿದ್ದಲು ಸಾಧ್ಯವಾಗದು. ಆದರೆ ಪ್ರತಿ ವ್ಯಕ್ತಿಯೂ, ಯಾವುದೇ ಕ್ಷೇತ್ರದಲ್ಲಿರಲಿ, ಆತ ತನ್ನನ್ನು ತಾನು ಶುದ್ಧವಾಗಿಟ್ಟುಕೊಳ್ಳಲು ಪ್ರತಿಯೊಬ್ಬರಿಗೂ ಸಾಧ್ಯವಿದೆ. ಅಂದರೆ ನಮ್ಮ ಮಟ್ಟಿಗೆ ನಾವು ಖಂಡಿತ ಶುದ್ಧರಾಗಿರಬಹುದು. ಅಂತಹವರಿಗೆ ಖಂಡಿತ ದೇವರ ಕೃಪೆ ಇರುತ್ತದೆ. ಅಂತಹವರ ಮನೆ-ಮನಸ್ಸಿನಲ್ಲಿ ಅತ್ಯಮೂಲ್ಯವಾದ ಶಾಂತಿ ನೆಲೆಸಿರುತ್ತದೆ”.
ಶ್ರೀಗಳ ದರ್ಶನ ಅಪಾರ ಸಂತಸ ಮೂಡಿಸಿತು. ಶ್ರೀಗಳ ಸರಳತೆ, ನಗುಮುಖ, ತೇಜಸ್ಸು, ಮಧುರವಾದ ಮಾತುಗಳು ಮನಸ್ಸನ್ನಾಕರ್ಷಿಸಿತು.
ಶ್ರೀಗಳಿಗೆ ನಾವು ಮಾಲಾರ್ಪಣೆ ಮಾಡಿ ಗೌರವಿಸಿದೆವು. ಅದೇ ಮಾಲೆಯನ್ನು ನನಗೆ ಹಾಕಿದ ಶ್ರೀಗಳು ಫಲ- ಮಂತ್ರಾಕ್ಷತೆ ನೀಡಿ ನಮ್ಮನ್ನು ಆಶೀರ್ವದಿಸಿದರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಭೀಮನಕಟ್ಟೆಯಲ್ಲಿ ಪುರಾಣೇತಿಹಾಸ ಪ್ರಸಿದ್ಧವಾದ “ಶ್ರೀ ಭೀಮನಕಟ್ಟೆ ಮಠ” ಇದೆ. ತುಂಗಾ ನದಿಯ ಪ್ರಶಾಂತ ಪರಿಸರದಲ್ಲಿರುವ ಈ ಮಠದ ಪ್ರಸ್ತುತ ಪೀಠಾಧಿಪತಿಗಳಾಗಿರುವ ಪ.ಪೂ. ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು 2024 ರ ತಮ್ಮ “16 ನೇ ಚಾತುರ್ಮಾಸ್ಯ ವ್ರತ”ವನ್ನು ತುಮಕೂರಿನಲ್ಲಿ ಕೈಗೊಂಡಿದ್ದಾರೆ. ಕಳೆದ ಜುಲೈ 21 ರಿಂದ ಶ್ರೀಗಳು ತುಮಕೂರಿನ ಕೆ.ಆರ್.ಬಡಾವಣೆಯ ಶ್ರೀ ಕೃಷ್ಣ ಮಂದಿರದಲ್ಲಿ ಮೊಕ್ಕಾಂ ಮಾಡಿದ್ದಾರೆ. ಸೆಪ್ಟೆಂಬರ್ 18 ರಂದು ಶ್ರೀಗಳ ಚಾತುರ್ಮಾಸ್ಯ ವ್ರತ ಮುಕ್ತಾಯವಾಗಲಿದ್ದು, ಇಲ್ಲಿಂದ ಭೀಮನಕಟ್ಟೆಗೆ ತೆರಳಲಿದ್ದಾರೆ.
-ಆರ್.ಎಸ್.ಅಯ್ಯರ್, ತುಮಕೂರು, ದಿ.17-09-2024 #rsiyertumakuru

Thursday, 12 September 2024

Ganesha Chaturthi-2024 - ಗಣೇಶ ಚತುರ್ಥಿ - ದಿ. 07-09-2024, ಶನಿವಾರ









---------------------------------


Video-2


Video-1

ಈ ವರ್ಷದ -ಶ್ರೀ ಕ್ರೋಧಿ ಸಂವತ್ಸರದ- ಶ್ರೀ ಗಣೇಶ ಚತುರ್ಥಿಯ ಪೂಜೆಯನ್ನು ಇಂದು (07-09-2024, ಶನಿವಾರ) ನಮ್ಮ ಮನೆಯಲ್ಲಿ ಆಚರಿಸಲಾಯಿತು.
ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (95) ಅವರು ಮಹಾಮಂಗಳಾರತಿ ಮಾಡುವುದರೊಂದಿಗೆ ಪೂಜೆ ಸಂಪನ್ನಗೊಂಡಿತು. ನಾನು ಮತ್ತು ವಿಶ್ವನಾಥನ್ ಇದ್ದೆವು.
||ಸರ್ವೇ ಜನಾಃ ಸುಖಿನೋ ಭವಂತು||
-ಆರ್.ಎಸ್.ಅಯ್ಯರ್, ತುಮಕೂರು, ದಿ. 07-09-2024, ಗಣೇಶ ಚತುರ್ಥಿ #rsiyertumakuru https://x.com/rsitmk https://www.instagram.com/r_s_iyer/?hl=en

Today (07-09-2024, Saturday) the Puja of Shri Ganesha Chaturthi of this year -Shri Krodhi Samvatsara- was celebrated at our house.
The pooja concluded with Mahamangalarathi performed by our father the freedom fighter Sri VS Ramachandran (95). Viswanathan and I were present.
||Sarve Janah Sukhino Bhavantu||
- R S Iyer Tumakuru, 07-09-2024, Ganesha Chaturthi

------------------------------------------------


 ಹಳೆಯ ತುಮಕೂರಿನ ಹೆಮ್ಮೆಯ ಕಲಾವಿದರಲ್ಲಿ ದಿವಂಗತ ಶ್ರೀ ಕಸ್ತೂರಿ ರಂಗಪ್ಪನವರೂ ಒಬ್ಬರಾಗಿದ್ದರು. ವಿಶೇಷವಾಗಿ ಮಣ್ಣಿನ ಗಣಪತಿ ವಿಗ್ರಹಗಳನ್ನು ರಚಿಸುವಲ್ಲಿ ಸಿದ್ಧಹಸ್ತರಾಗಿ, ತಮ್ಮದೇ ಛಾಪು ಮೂಡಿಸಿದ್ದರು. ಇವರ ಜೊತೆಯಲ್ಲಿ ಸಹೋದರರಾದ ದಿವಂಗತ ಶ್ರೀ ರಾಜು ರವರು ಮತ್ತು ಶ್ರೀ ಕುಮಾರ್ ರವರೂ ಕೈಜೋಡಿಸುತ್ತಿದ್ದರು.

ಗಣಪತಿ ಹಬ್ಬ ಬಂತೆಂದರೆ ತುಮಕೂರಿನ ಬಹುತೇಕ ಎಲ್ಲ ಬಡಾವಣೆಗಳಿಂದ ನೂರಾರು ಜನರು ಗಣಪತಿ ವಿಗ್ರಹಗಳನ್ನು ಖರೀದಿಸಲು ತುಮಕೂರಿನ ಚಿಕ್ಕಪೇಟೆಯ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯದ ಎದುರು ಬದಿ ಇರುವ ಇವರ ಮನೆಗೇ ಬರುತ್ತಿದ್ದರು. ಇವರು ಸಿದ್ಧಪಡಿಸುತ್ತಿದ್ದ ಗಣಪತಿ ವಿಗ್ರಹಗಳೆಂದರೆ ಅದೇನೋ ಆಕರ್ಷಣೆ. ಸುಮಾರು 60 ವರ್ಷಗಳಿಗೂ ಹಿಂದಿನಿಂದಲೂ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ ರವರು ಇಲ್ಲಿಂದಲೇ ಗಣಪತಿಯನ್ನು ತರುತ್ತಿದ್ದರು. ಅದೇ ಪರಂಪರೆ ಈಗಲೂ ಮುಂದುವರೆದಿದೆ. ದಿವಂಗತ ಶ್ರೀ ಕಸ್ತೂರಿ ರಂಗಪ್ಪನವರ ಸುಪುತ್ರ ಶ್ರೀ ಮಂಜುನಾಥ್ ರವರು ತಮ್ಮ ಈ ಕುಲಕಸುಬನ್ನು ಯಶಸ್ವಿಯಾಗಿ ಮುಂದುವರೆಸಿದ್ದಾರೆ. ಈಗಲೂ ನಗರದ ನಾನಾ ಭಾಗಗಳಿಂದ ಗಣಪತಿ ವಿಗ್ರಹ ಕೊಳ್ಳಲು ಜನರು ಇಲ್ಲಿಗೇ ಹುಡುಕಿಕೊಂಡು ಬರುತ್ತಾರೆಂಬುದು ಇಲ್ಲಿನ ವೈಶಿಷ್ಟ್ಯ.
ನಾನು ಮತ್ತು ವಿಶ್ವನಾಥನ್ ಇಂದು (ದಿನಾಂಕ 04-09-2024, ಬುಧವಾರ) ಮಧ್ಯಾಹ್ನ ಅಲ್ಲಿಗೆ ತೆರಳಿ ಶ್ರೀ ಗೌರಿ ಮತ್ತು ಶ್ರೀ ಗಣೇಶನ ಮಣ್ಣಿನ ಮೂರ್ತಿಗಳನ್ನು ಖರೀದಿಸಿ ಮನೆಗೆ ತಂದೆವು. ಇಲ್ಲಿಂದ ಮೂರ್ತಿಗಳನ್ನು ತರುವುದೇ ಅದೇನೋ ಖುಷಿಯ ಸಂಗತಿ.
-ಆರ್.ಎಸ್.ಅಯ್ಯರ್, ತುಮಕೂರು, ದಿ. 04-09-2024 #rsiyertumakuru

Thursday, 15 August 2024

Great-grandfather and Great-grandson face off- 14-08-2024- ಮುತ್ತಜ್ಜ-ಮರಿಮಗನ ಮುಖಾಮುಖಿ

 ಮುತ್ತಜ್ಜ-ಮರಿಮಗನ ಮುಖಾಮುಖಿ

ಮುತ್ತಜ್ಜ ವಿ.ಎಸ್.ರಾಮಚಂದ್ರನ್ (95) ಮತ್ತು ಮರಿಮಗ ಕೃಷ್ಣ (ಒಂದೂಮುಕ್ಕಾಲು ವರ್ಷ) ಪರಸ್ಪರ ಮುಖಾಮುಖಿ ಆಗಿ ಖುಷಿಪಟ್ಟರು.  

ಪುಟಾಣಿ ಕೃಷ್ಣ  ತನ್ನ ತಾಯಿ ಶ್ರೀಮತಿ ಸುನಯನ (ರಾಮಚಂದ್ರನ್ ರವರ ಮೊಮ್ಮಗಳು- ಸಾಫ್ಟ್ ವೇರ್ ಇಂಜಿನಿಯರ್),  ತನ್ನ ಅಜ್ಜಿ ಶ್ರೀಮತಿ ರಾಜೇಶ್ವರಿ (ರಾಮಚಂದ್ರನ್ ರವರ ಮಗಳು) ಮತ್ತು ತನ್ನ ತಾತ ಶ್ರೀ ಹೆಚ್.ಕೆ.ವೇಣುಗೋಪಾಲ್ (ಎಲೆಕ್ಟ್ರಿಕಲ್ ಕಂಟ್ರಾಕ್ಟರ್) ರವರ ಜೊತೆಯಲ್ಲಿ ದಿನಾಂಕ 14-08-2024 ರಂದು ಸಂಜೆ ನಮ್ಮ ಮನೆಗೆ ಆಗಮಿಸಿದ್ದಾಗ ಈ ಮುಖಾಮುಖಿ ಆಯಿತು. 

ಮರಿಮಗ ಕೃಷ್ಣ ತನ್ನ ಮುತ್ತಜ್ಜನ ಕೆನ್ನೆ ಸವರಿದ. ಗಡ್ಡ ಹಿಡಿದುಕೊಂಡ. ಕೈಕುಲುಕಿದ. ಪಾದಕ್ಕೆ ನಮಸ್ಕರಿಸಿದ. ಇವೆಲ್ಲ ಸಂದರ್ಭಗಳಲ್ಲೂ ಈರ್ವರ ಮೊಗದಲ್ಲೂ ಅನಿರ್ವಚನೀಯ ಸಂತಸ ಭೋರ್ಗರೆಯಿತು. ನಾನು ಮತ್ತು ಆರ್.ವಿಶ್ವನಾಥನ್ ಇದಕ್ಕೆ ಸಾಕ್ಷಿಯಾದೆವು. 

-ಆರ್.ಎಸ್.ಅಯ್ಯರ್, ತುಮಕೂರು, ದಿ. 14-08-2024




















Sunday, 11 August 2024

VSR Sanmana- 2024 August- ಜಿಲ್ಲಾಡಳಿತದಿಂದ ವಿ.ಎಸ್.ರಾಮಚಂದ್ರನ್ ರವರಿಗೆ ಸನ್ಮಾನ

 ಜಿಲ್ಲಾಡಳಿತದಿಂದ ವಿ.ಎಸ್.ರಾಮಚಂದ್ರನ್ ರವರಿಗೆ ಸನ್ಮಾನ 2024 ---------------------------------

ತುಮಕೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್ (95 ವರ್ಷಗಳು) ಅವರನ್ನು 78 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಡಳಿತವು ಇಂದು (ದಿ. 09-08-2024) ಸಂಜೆ ನಮ್ಮ ಮನೆಗೇ ಆಗಮಿಸಿ ಸನ್ಮಾನಿಸಿತು. ತುಮಕೂರು ತಾಲ್ಲೂಕು ಕಚೇರಿಯ ಅಧಿಕಾರಿಗಳು ಆಗಮಿಸಿ ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ, ಫಲತಾಂಬೂಲ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ನಾನು ಮತ್ತು ವಿಶ್ವನಾಥನ್ ಇದ್ದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 09-08-2024 #rsiyertumakuru
Tumkur district administration honored our father Shri V.S. Ramachandran (95 Years), a senior freedom fighter of Tumkur, on the occasion of 78th Independence Day celebrations by arriving at our home today (09-08-2024) evening. Officials of Tumkur taluk office came and honored Sri V S Ramachandran. Viswanathan and I were present on this occasion.
-R S Iyer, Tumakuru, Karnataka,




__________________________________________________





--------------------------------------------------
---------------------------------------------------
-------------------------------------------------------------
-------------------------------------------------------------
--------------------------------------------------------------------