ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ವಿ.ಎಸ್.ರಾಮಚಂದ್ರನ್ (97) ರವರ ಬಹುಕಾಲದ ಮಿತ್ರರಾದ ಶ್ರೀ ರಘುನಾಥರಾವ್ (90) ರವರು ನಮ್ಮ ತಂದೆಯವರನ್ನು ನೋಡಲೆಂದೇ ಬೆಂಗಳೂರಿನಿಂದ ಇಂದು (ದಿ. 18-08-2026) ಮಧ್ಯಾಹ್ನ ಅನಿರೀಕ್ಷಿತವಾಗಿ ನಮ್ಮ ಮನೆಗೆ ಆಗಮಿಸಿದ್ದು, ಸಂತೋಷವನ್ನುಂಟುಮಾಡಿತು.
ಕಪ್ಪು ಸಫಾರಿ ಉಡುಪಿನಲ್ಲಿದ್ದ 90 ರ ಹರೆಯದ ಶ್ರೀಯುತರ ಅಪಿಯರೆನ್ಸ್ ಯುವಕರನ್ನೂ ನಾಚಿಸುವಂತಿತ್ತು ಎಂದರೆ ಅತಿಶಯೋಕ್ತಿಯಾಗದು! ರಘು ಎಂದೇ ಕುಟುಂಬದ ವಲಯದಲ್ಲಿ ಸುಪರಿಚಿತರಾದ ಅವರು, ಸುಮಾರು 65 ವರ್ಷಗಳಿಗೂ ಹಿಂದಿನಿಂದ ನಮ್ಮ ತಂದೆಯವರ ಸ್ನೇಹಿತರು. ತುಮಕೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಪಕ್ಕದ ದೊಡ್ಡ ಕಟ್ಟಡದಲ್ಲಿದ್ದ ಆ ಕಾಲದ ಹೆಸರಾಂತ ಮಾಡರನ್ ಹೋಟೆಲ್ ನಲ್ಲಿ ಇವರು ವ್ಯವಸ್ಥಾಪಕರಾಗಿ/ ಕ್ಯಾಷಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲೇ ಪಕ್ಕದ ಅಗ್ರಹಾರದ ನಿವಾಸಿಗಳಾಗಿದ್ದರು. ಹೀಗಾಗಿ ನಮ್ಮ ತಂದೆಯವರಿಗೆ ಸುಮಾರು 1960 ನೇ ಇಸವಿಯಿಂದಲೂ ಮಿತ್ರರು. ಕಳೆದ 25 ವರ್ಷಗಳ ಹಿಂದೆ ಇವರು ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದು, ಸದ್ಯ ಬೆಂಗಳೂರಿನ ನಿವಾಸಿಗಳಾಗಿದ್ದಾರೆ.
ಇವರಿಗೀಗ 90 ವರ್ಷ. ಇವರ ಅಣ್ಣ ತುಮಕೂರಿನಲ್ಲೇ ಇರುವ ಶ್ರೀ ಗುರುಮೂರ್ತಿ ಆಚಾರ್ ರವರಿಗೆ 95 ವರ್ಷ. ಕುಣಿಗಲ್ ನಲ್ಲಿರುವ ಹಿರಿಯ ಅಣ್ಣ ಶ್ರೀನಿವಾಸ್ ರವರಿಗೆ 98 ವರ್ಷ. ಮೂವರೂ ದೈವಕೃಪೆಯಿಂದ ಆರೋಗ್ಯದಿಂದ ಓಡಾಡಿಕೊಂಡಿದ್ದಾರೆ ಎಂಬ ಮಾಹಿತಿ ಚರ್ಚೆಯ ಸಂದರ್ಭದಲ್ಲಿ ತಿಳಿದಾಗ ನಮಗೋ ಆನಂದ ಹಾಗೂ ಆಶ್ಚರ್ಯ.
ಬಸ್ ನಲ್ಲಿ ತುಮಕೂರಿಗೆ ಬಂದು ಆಟೋ ಹಿಡಿದು ಜಯನಗರಕ್ಕೆ ಬಂದು, ಅಲ್ಲಿಂದ ನಡೆದುಕೊಂಡೇ ವಿಳಾಸ ಹುಡುಕಿಕೊಂಡು ನಮ್ಮ ಮನೆಗೆ ಬಂದ ಶ್ರೀಯುತರು, ಸೀದಾ ನೆಲದ ಮೇಲೇ ಸುಖಾಸನದಲ್ಲಿ ಆಸೀನರಾಗಿ ನಮ್ಮ ತಂದೆಯವರೊಡನೆ ಮಾತುಕತೆ ನಡೆಸಿ ಸಂತೋಷಪಟ್ಟರು. ನಮ್ಮ ತಂದೆಯವರು ಶ್ರೀ ರಘುರವರಿಗೆ ಶಾಲು ಹೊದಿಸಿ ಗೌರವಿಸಿದರು. ಬಳಿಕ ನಗರದ ಉಪ್ಪಾರಹಳ್ಳಿ ನಿವಾಸಿಗಳಾದ ಹಾಗೂ ತಮ್ಮ ಇನ್ನೋರ್ವ ಮಿತ್ರರಾಗಿರುವ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಟಿ.ಆರ್.ರೇವಣ್ಣ (98) ರವರ ಮನೆಯ ವಿಳಾಸದ ವಿವರ ನಮ್ಮಿಂದ ಪಡೆದುಕೊಂಡ ಶ್ರೀಯುತರು, ಆಟೋ ಹಿಡಿದು ಅಲ್ಲಿಗೆ ತೆರಳಿದರು. ಇದೀಗ ರಾತ್ರಿ 8 ಗಂಟೆಯಲ್ಲಿ ಆರ್. ವಿಶ್ವನಾಥನ್ ಗೆ ಫೋನ್ ಮಾಡಿ, ಬಸ್ ಮೂಲಕ ಈಗಷ್ಟೇ ಬೆಂಗಳೂರಿನ ಮನೆ ತಲುಪಿದ್ದಾಗಿ ಮಾಹಿತಿ ನೀಡಿದರು.
ಹಿರಿಯ ತಲೆಮಾರಿನವರಲ್ಲಿರುವ ಹಳೆಯ ಕಾಲದ ಆ ಪ್ರೀತಿ, ಸ್ನೇಹ, ವಿಶ್ವಾಸಗಳನ್ನು ನೋಡಿ ನಾವು ಮೂಕವಿಸ್ಮಿತರಾದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 18-08-2026 #rsiyertumakuru



No comments:
Post a Comment