ತುಮಕೂರಿನ ಹೆಮ್ಮೆಯ ಆನೆ - "ಲಕ್ಷ್ಮಿ" …
ಚಿಕ್ಕಪೇಟೆ ಕಡೆಯಿಂದ ಇಂದು (ದಿ. 02-09-2025) ಮುಸ್ಸಂಜೆ ನಾನು ಮತ್ತು ವಿಶ್ವನಾಥನ್ ಬೈಕ್ ನಲ್ಲಿ ಜಯನಗರದತ್ತ ಹಿಂತಿರುಗುವಾಗ “ನಮ್ಮ ತುಮಕೂರು” ನಗರದ ಹೊರಪೇಟೆಯ ಶ್ರೀ ಕರಿಬಸವಸ್ವಾಮಿಗಳ ಮಠದ ತಿರುವಿನ ಬಳಿ ಮಿತ್ರರಾದ ಪ್ರೆಸ್ ಫೋಟೋಗ್ರಾಫರ್ ರೇಣುಕಾ ಅವರು ಎದುರಾದರು. ಅಲ್ಲೇ ಎದುರುಬದಿ ಮಠದ ಆನೆ “ಲಕ್ಷ್ಮಿ” ನಿಂತಿತ್ತು. “ಬನ್ನಿ ಅಲ್ಲೇ ಆನೆ ಹತ್ತಿರ ನಿಂತು ಮಾತಾಡೋಣ” ಎನ್ನುತ್ತಾ ಮೂವರೂ ಅನಿರೀಕ್ಷಿತವಾಗಿ ಆನೆಯ ಬಿಡಾರಕ್ಕೆ ಬಂದೆವು.
ನಗರದ ಯಾವುದೋ ಒಂದು ಬಡಾವಣೆಗೆ ಬೆಳಗ್ಗೆ ಹೋಗಿ ಅಲ್ಲೆಲ್ಲ ಆರೆಂಟು ಕಿ.ಮೀ. ಸುತ್ತಾಡಿ ಸಂಜೆಯಷ್ಟೇ ಬಿಡಾರಕ್ಕೆ ವಾಪಸ್ ಬಂದಿದ್ದ “ಲಕ್ಷ್ಮಿ” ಹಸಿರು ತೆಂಗಿನ ಗರಿಯನ್ನು ತಿನ್ನುತ್ತಿದ್ದಳು. ಒಮ್ಮೊಮ್ಮೆ ಆ ಗರಿಯನ್ನು ಸೊಂಡಲಿನಲ್ಲಿ ಹಿಡಿದು ತನ್ನ ಮೈಮೇಲೆ ಸವರಿಕೊಂಡು ಸೊಳ್ಳೆ ಕಾಟವನ್ನು ನಿವಾರಿಸಿಕೊಳ್ಳುತ್ತಾ ಶಾಂತವಾಗಿ ನಿಂತಿದ್ದಳು. ಅಲ್ಲೇ ಆ ಆನೆಯ ಮಾವುತ ಅಥವಾ ಗಜಪಾಲಕ ಸಲೀಂ ಅವರು ಸಹಾ ಇದ್ದರು.
ಸಲೀಂ ಅವರೊಂದಿಗೆ ಹಾಗೆಯೇ ಮಾತನಾಡುತ್ತಾ ನಿಂತಾಗ ಆನೆಯ ದಿನಚರಿ ಕುರಿತ ಕೆಲ ಮಾಹಿತಿಗಳು ದೊರಕಿದವು. ಆನೆ “ಲಕ್ಷ್ಮಿ”ಗೆ ಈಗ 33 ವರ್ಷ ವಯಸ್ಸು. ಅದು ಇಲ್ಲಿಗೆ ಬಂದಾಗ ಸುಮಾರು ಒಂದು ಅಥವಾ ಎರಡು ವರ್ಷ ವಯಸ್ಸಿನ ಪುಟಾಣಿ ಮರಿ ಆನೆ. ಆಗಿನಿಂದ ಅದು ತುಮಕೂರಿನ ಪರಿಸರದಲ್ಲೇ, ಇಲ್ಲಿನ ಜನರ ನಡುವೆಯೇ, ಈ ಮಠದ ಆವರಣದ ಬಿಡಾರದಲ್ಲೇ ಬೆಳೆಯುತ್ತಿದೆ. ಈಗ ದೊಡ್ಡ ಆನೆಯಾಗಿ ಬೆಳೆದು ನಿಂತಿದೆ. ಸುಮಾರು 10 ಅಡಿಗಳಷ್ಟು ಎತ್ತರವಿದೆ. ಸುಮಾರು 6,300 ಕೆ.ಜಿ.ಯಷ್ಟು ತೂಕವಿದೆ. “ಲಕ್ಷ್ಮಿ”ಯು ನಗರದ ರಸ್ತೆಗಳಲ್ಲಿ ಸಂಚರಿಸುವಾಗ ಜನರು ಪ್ರೀತಿಯಿಂದ ಹಣ್ಣುಹಂಪಲು ನೀಡುತ್ತಿರುತ್ತಾರೆ. ಹಣವನ್ನೂ ನೀಡಿ ದೇವರೆಂದು ಕೈಮುಗಿಯುತ್ತಾರೆ. ಸಂಚಾರಿಗರು ಕುತೂಹಲದಿಂದ ನಿಂತು ನೋಡುತ್ತಿರುತ್ತಾರೆ.
“ಇಡೀ ರಾಜ್ಯದಲ್ಲೇ ಈ ವಯಸ್ಸಿಗೆ ಇಷ್ಟು ಎತ್ತರ ಹಾಗೂ ತೂಕ ಹೊಂದಿರುವ ಏಕೈಕ ಆನೆ ಇದು” ಎಂದು ಕಳೆದ 27 ವರ್ಷಗಳಿಂದ ಈ ಆನೆಯನ್ನು ಸಾಕಿ-ಸಲಹುತ್ತಿರುವ ಹಾವೇರಿ ಸಮೀಪದ ಹಲಗೇರಿ ಗ್ರಾಮದ ಮಾವುತ ಸಲೀಂ ಅವರು ಹೆಮ್ಮೆಯಿಂದ ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “ಈ ಆನೆಯನ್ನು ಕೇರಳಕ್ಕೆ ಒಯ್ದು ಗಂಡಾನೆಯೊಂದಿಗೆ ಸೇರಿಸಬೇಕೆಂಬ ಆಲೋಚನೆ ಇದೆ. ಇದಕ್ಕೆ ಅಧಿಕ ಖರ್ಚು-ವೆಚ್ಚ ಬರಲಿದ್ದು, ಕಾದುನೋಡಲಾಗುತ್ತಿದೆ” ಎಂಬ ವಿಷಯವನ್ನೂ ಅವರು ತಿಳಿಸಿದರು.
ನಾವು ಮಾತನಾಡುತ್ತಿರುವಾಗಲೇ ಗೃಹಿಣಿಯೊಬ್ಬರು ಸ್ಕೂಟರಿನಲ್ಲಿ ಬಂದರು. ಎರಡು ಬ್ಯಾಗುಗಳಲ್ಲಿ ತಂದಿದ್ದ ಬಾಳೆಹಣ್ಣುಗಳನ್ನು ಪ್ರೀತಿಯಿಂದ, ಭಕ್ತಿಯಿಂದ "ಲಕ್ಷ್ಮಿ" ಗೆ ನೀಡಿ, ನಮಿಸಿದರು. ಕುತೂಹಲದಿಂದ ವಿಚಾರಿಸಿದಾಗ ತಿಳಿದ ಸಂಗತಿಯೆಂದರೆ- “ನಗರದ ಶಿರಾಗೇಟ್ ನಿವಾಸಿಗಳಾದ ಅವರು ಈ ಆನೆಯನ್ನು ದೇವರೆಂದೇ ಭಾವಿಸಿದ್ದಾರೆ. ಈ ಆನೆಯ ಮುಂದೆ ಬಂದು ಪ್ರಾರ್ಥನೆ ಮಾಡಿ ಕೈಗೊಂಡ ಕೆಲಸಕಾರ್ಯಗಳೆಲ್ಲ ಯಶಸ್ವಿಯಾಗಿವೆಯಂತೆ. ಹೀಗಾಗಿ ಹಲವು ತಿಂಗಳುಗಳಿಂದ ಪ್ರತಿ ನಿತ್ಯ ಅವರು ಆನೆ ಬಿಡಾರಕ್ಕೆ ಬಂದು, ಆನೆಗೆ ಬಾಳೆ ಹಣ್ಣನ್ನು ನೀಡಿ ನಮಿಸುತ್ತಾರೆ.” ಅಷ್ಟರಲ್ಲೇ ಮತ್ತೊಬ್ಬ ವ್ಯಕ್ತಿ ಬಾಳೆಹಣ್ಣಿನ ಚಿಪ್ಪು ಹಿಡಿದು ಬಂದು ಆನೆಗೆ ತಿನ್ನಿಸಿ ಕೈಮುಗಿದು ಹೋದರು. ಇದು “ಲಕ್ಷ್ಮಿ” ಯು ತುಮಕೂರಿನ ಜನರಲ್ಲಿ ಮೂಡಿಸಿರುವ ಸದ್ಭಾವನೆ. ಈ ಪ್ರಸಂಗಗಳನ್ನು ಬೆರಗುಗಣ್ಣಿನಿಂದ ನೋಡುತ್ತಾ ನಿರ್ಗಮಿಸಿದೆವು.
-ಆರ್.ಎಸ್.ಅಯ್ಯರ್, ತುಮಕೂರು, ದಿ. 02-09-2025 #rsiyertumakuru.





No comments:
Post a Comment