* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Thursday 20 September 2018

L R Narayanachar...ಹೋರಾಟರಾರರಾದ ಎಲ್.ಆರ್.ನಾರಾಯಣಾಚಾರ್

ಹೋರಾಟರಾರರಾದ ಎಲ್.ಆರ್.ನಾರಾಯಣಾಚಾರ್....

“ಸಾರ್..ಇಂದು ಪತ್ರಿಕೆಯಲ್ಲಿ ಈ ವಿಷಯ ಓದಿದೆ. ಉಪವಿಭಾಗಾಧಿಕಾರಿಗಳ ಆದೇಶದ ಪ್ರತಿ ನನ್ನಲ್ಲಿದೆ. ಜೊತೆಗೆ ಸುಪ್ರಿಂ ಕೋರ್ಟ್ ಆದೇಶದ ಪ್ರತಿಯೂ ಇದೆ. ನೀವು ಭೇಟಿ ಆದರೆ ಅದನ್ನು ಕೊಡುತ್ತೇನೆ'' -ನಿನ್ನೆ (19-09-2018, ಬುಧವಾರ) ಬೆಳ್ಳಂಬೆಳಗ್ಗೆ ಮಿತ್ರರೂ, ಸಾರ್ವಜನಿಕ ಹೋರಾಟಗಾರರೂ ಆದ ಶ್ರೀ  ಎಲ್.ಆರ್.ನಾರಾಯಣಾಚಾರ್ ಅವರು ನನಗೆ ಕರೆ ಮಾಡಿ ಹೇಳಿದರು.
“ಆಯಿತು ಆಚಾರ್ರೇ ...ಬೆಳಗ್ಗೆ 11 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಬರುತ್ತೇನೆ'' ಎಂದೆ. ಅಲ್ಲಿ ಅವರ ಭೇಟಿಯಾಯಿತು. ಜೊತೆಗೇ ಸಾರ್ವಜನಿಕ ಹೋರಾಟಗಾರರಾದ ಶ್ರೀ ಜಿ.ಕೆ.ಶ್ರೀನಿವಾಸ್ ( ಟೂಡಾ ಮಾಜಿ ಸದಸ್ಯರು) ಮತ್ತು  ಶ್ರೀ ಇಮ್ರಾನ್ ಪಾಷ ಅವರೂ ಬಂದರು. 
ನಗರದ ಪಟ್ಟಭದ್ರಹಿತಾಸಕ್ತಿಗಳು, ಗೋಮುಖವ್ಯಾಘ್ರದಂತಹವರು ಹಾಗೂ ಅಧಿಕಾರಸ್ಥರಿಗೆ ಬಕೀಟು ಹಿಡಿಯುತ್ತ ಒಳಗೊಳಗೇ ಲಾಭ ಮಾಡಿಕೊಳ್ಳುವ ನಕಲಿಶಾಮರಂಥವರು, ಆಷಾಢಭೂತಿಗಳು ಮಾಡುತ್ತಿರುವ ದಗಲ್ಬಾಜಿತನದ ಬಗ್ಗೆ ಆಚಾರ್ರು ಕೆಂಡಕಾರಿದರು. ವಯಸ್ಸು 63 ಆಗಿ ಆರೋಗ್ಯದಲ್ಲಿ ಏರುಪೇರಾಗಿ ಸ್ವಲ್ಪ ಮೆತ್ತಗಾದಂತೆ ಕಾಣಿಸಿದರೂ, ಅವರ ಹೋರಾಟದ ಕಿಚ್ಚು ಸ್ವಲ್ಪವೂ ಬತ್ತಿಲ್ಲವೆಂಬುದನ್ನು ಅವರ ಮಾತುಗಳು ಹೇಳುತ್ತಿದ್ದವು.
"ಎಲ್.ಆರ್.ನಾರಾಯಣಾಚಾರ್ ನಮ್ಮ ತುಮಕೂರು ನಗರದ ಚಿಕ್ಕಪೇಟೆ ನಿವಾಸಿಗಳು. ಸರಿಸುಮಾರು 20-25 ವರ್ಷಗಳಷ್ಟು ಸುದೀರ್ಘ ಕಾಲದಿಂದಲೂ ಸಾರ್ವಜನಿಕ ಹೋರಾಟಗಾರರಾಗಿ ಗುರುತಿಸಲ್ಪಟ್ಟವರು. ಹಳೆಯದ್ದೊಂದು ಸೈಕಲ್ ಗೆ ಅನೇಕ ದಾಖಲಾತಿಗಳುಳ್ಳ ಬ್ಯಾಗ್ ಕಟ್ಟಿಕೊಂಡು ಊರಲ್ಲೆಲ್ಲ ಸಂಚರಿಸುತ್ತಿದ್ದವರು. ಪಾರ್ಕ್, ಆಟದ ಮೈದಾನ, ಕೆರೆಕಟ್ಟೆಗಳು ಮೊದಲಾದ ಸರ್ಕಾರಿ ಆಸ್ತಿಗಳು ಪಟ್ಟಭದ್ರರಿಂದ ಗುಳುಂ ಆಗಿರುವುದರ ವಿರುದ್ಧ ಸರ್ಕಾರಕ್ಕೆ ಸತತ ಅರ್ಜಿ ಬರೆಯುವುದು, ಬೆಂಗಳೂರಿಗೆ ತೆರಳಿ ಹಿರಿಯ ಅಧಿಕಾರಿಗಳಿಗೂ ದೂರು ಕೊಡುವುದು, ಮಾಹಿತಿ ಹಕ್ಕು ಅರ್ಜಿ ಮೂಲಕ ಮಾಹಿತಿ ಸಂಗ್ರಹಿಸುವುದು, ದೂರನ್ನು ರಾಜ್ಯ ಮಾಹಿತಿ ಆಯೋಗದವರೆಗೂ ಒಯ್ಯುವುದು, ಮಾನವ ಹಕ್ಕು ಉಲ್ಲಂಘನೆ ವಿರುದ್ಧ ಹೋರಾಡುವುದು ಹೀಗೆ ಹೋರಾಡಿ-ಹೋರಾಡಿ ಅನೇಕ ಪಟ್ಟಭದ್ರರ ಕೆಂಗಣ್ಣಿಗೆ ಗುರಿಯಾದವರು. ಅದೇ ಹೊತ್ತಿಗೆ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಆಸ್ತಿಗಳು ಪಟ್ಟಭದ್ರರಿಂದ ಗುಳುಂ ಆಗದಂತೆ ತಡೆದವರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬೆಚ್ಚಿಬೀಳುವಂತೆ ಮಾಡಿದವರು. ಈ ಇಳಿ ವಯಸ್ಸಿನಲ್ಲೂ ಯಾವ್ಯಾವುದೋ ದಾಖಲಾತಿಗಳ ಫೈಲ್ ಹೊತ್ತುಕೊಂಡು ಕಚೇರಿ-ಕಚೇರಿಗೆ ಸುತ್ತಾಡುತ್ತಿರುವವರು. ಇಷ್ಟಾಗಿಯೂ ಅವರು ಸ್ವಂತದ ಕಷ್ಟಸುಖಗಳ ಬಗ್ಗೆ ಯಾರ ಬಳಿಯೂ ಏನೂ ಹೇಳಿಕೊಳ್ಳದ, ಯಾರಿಂದಲೂ ಏನನ್ನೂ ಕೇಳದ ಅಪರೂಪದ ಗುಣವುಳ್ಳವರು" ಎಂಬುದನ್ನು ತುಮಕೂರಿನ ತಿಳುವಳಿಕೆಯುಳ್ಳವರೆಲ್ಲರೂ ಬಲ್ಲರು.
- R.S. Iyer, Tumakuru

Sri L.R.Narayanachar and R.S.Iyer


R.S.Iyer, Sri Imran Pasha, Activist , Sri L.R.Narayanachar,& Sri G.K.Srinivas, Activist and Ex TUDA Member
-------------------------------------------------------------------------------------


Another Photo with Sri L R Narayanachar @ D.C. Office, Tumakuru . Advocate Sri Chandrachuda and Sri Imran Pasha also seen.

〰〰〰〰〰〰〰〰〰〰〰〰〰〰〰〰〰〰〰〰〰

ಈ ಕೆಳಗಿನ ಚಿತ್ರದಲ್ಲಿರುವವರು (ಎಡದಿಂದ) ಶ್ರೀ ಹೆಚ್.ಎಸ್.ಶಿವಕುಮಾರ್, ಹನುಮಂತಪುರ ಮತ್ತು ಶ್ರೀ ಶಾಮಣ್ಣ ರವರು. 

ಈರ್ವರೂ ತುಮಕೂರಿನಲ್ಲಿ ಒಂದು ಕಾಲದಲ್ಲಿ "ಭೂಮಿ ನುಂಗಣ್ಣ"  (Land Grabbers) ಮತ್ತಿತರ ಪಟ್ಟಭದ್ರಹಿತಾಸಕ್ತಿಗಳಿಗೆ ಸಿಂಹಸ್ವಪ್ನವಾಗಿದ್ದ  ಸಾರ್ವಜನಿಕ ಹೋರಾಟಗಾರರು. ರಸ್ತೆ, ಕೆರೆ, ಉದ್ಯಾನವನ, ಆಟದ ಮೈದಾನ, ಸರ್ಕಾರಿ ಜಾಗ ಮೊದಲಾದವುಗಳ ರಕ್ಷಣೆಗಾಗಿ ಸಾರ್ವಜನಿಕ ಹಿತಾಸಕ್ರಿಯಿಂದ ಸರ್ಕಾರಕ್ಕೆ ಪತ್ರ ಬರೆಯುವುದು, ಮಾಹಿತಿ ಹಕ್ಕು ಅರ್ಜಿ ಸಲ್ಲಿಸುವುದು, ಪೊಲೀಸರಿಗೆ ದೂರು ನೀಡುವುದು, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು -ಹೀಗೆ ನಾನಾ ಮಾರ್ಗಗಳಿಂದ "ಭೂಮಿ ನುಂಗಣ್ಣ"ರಿಗೆ ಹಾಗೂ ಪಟ್ಟಭದ್ರರಿಗೆ ಇವರಿಬ್ಬರೂ ನಿದ್ದೆಗೆಡಿಸಿದ್ದರು. ಭ್ರಷ್ಟ ಅಧಿಕಾರಿಗಳೂ ಇವರನ್ನು ಕಂಡರೆ ಬೆವರುತ್ತಿದ್ದರು. ಒಂದು ಕಾಲದಲ್ಲಿ ಇವರುಗಳು ನಡೆಸಿದ ಹೋರಾಟದ ಫಲವಾಗಿ  "ಭೂಮಿ ನುಂಗಣ್ಸ" ರ ಪಾಲಾಗಿದ್ದ  ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಆಸ್ತಿಗಳು ಪುನಃ ಸರ್ಕಾರಕ್ಕೆ ಸೇರುವಂತಾದುದನ್ನು ತುಮಕೂರಿನ ಪ್ರಜ್ಞಾವಂತರು ಮರೆಯುವಂತಿಲ್ಲ. 

Sri H.S.Shivakumar, Hanumanthapura, Tumakuru & Sri Shamanna, Tumakuru

No comments:

Post a Comment