* ಅಸೂಯಾ ಪರಿತ್ಯಾಗವೇ ಆರೋಗ್ಯಭಾಗ್ಯ - * ಉಪಕಾರ ಸ್ಮರಣೆಯೇ ಮನುಷ್ಯನ ಬಲ - * ಪರೋಪಕಾರವೇ ಅಧಿಕಾರ ಪ್ರಯೋಜನ *

Friday 14 September 2018

visit to Nanjanagudu Temple -1

ನಂಜನಗೂಡಿನ ದೇಗುಲದಲ್ಲಿ…
****************************
ಭಾಗ-1
ಹಿಮವದ್ ಗೋಪಾಲಸ್ವಾಮಿ ಬೆಟ್ಟದಿಂದ ಮರಳುವಾಗ (09-09-2018, ಭಾನುವಾರ) ಮಾರ್ಗಮಧ್ಯೆ ಸಂಜೆ ನಂಜನಗೂಡಿನ ಸುವಿಖ್ಯಾತ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೂ ನಾವು (ನಾನು, ವಿಶ್ವನಾಥನ್, ನಮ್ಮ ತಂದೆ ಶ್ರೀ ವಿ.ಎಸ್.ರಾಮಚಂದ್ರನ್, ಮಿತ್ರರಾದ ಶ್ರೀ ಬೆಳಗುಂಬ ವೆಂಕಟೇಶ್ ಮತ್ತು ಶ್ರೀ ಶಿವಕುಮಾರ್) ಭೇಟಿ ಕೊಟ್ಟೆವು. ಭಕ್ತಾದಿಗಳ ಸಂಖ್ಯೆ ತೀರಾ ವಿರಳವಾಗಿದ್ದುದರಿಂದ ಕೆಲವೇ ನಿಮಿಷಗಳಲ್ಲಿ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ದರ್ಶನವಾಯಿತು. ಸಂತೋಷವೂ ಆಯಿತು. ಆದರೆ ದೇವರ ಸನ್ನಿಧಿಯಲ್ಲಿಕುಳಿತಿದ್ದ ಅರ್ಚಕರೊಬ್ಬರು ಸ್ಮಾರ್ಟ್ ಫೋನ್ ನಲ್ಲಿ ಏನನ್ನೋ ವೀಕ್ಷಿಸುತ್ತ ತನ್ಮಯರಾಗಿದ್ದುದು ನಮಗೆ ಬೇಸರ ತರಿಸಿತು. “ಹಿಮವದ್ ಗೋಪಾಲಸ್ವಾಮಿ ದೇಗುಲದ ಅರ್ಚಕರು ಮತ್ತು ಸಿಬ್ಬಂದಿಯು ಬಂದ ಭಕ್ತಾದಿಗಳೊಂದಿಗೆ ಸ್ಪಂದಿಸುತ್ತಿದ್ದ ರೀತಿಗೂ, ಇಲ್ಲಿನವರ ರೀತಿಗೂ ಎಷ್ಟೊಂದು ಅಜಗಜಾಂತರ ವ್ಯತ್ಯಾಸ” ಎಂಬ ಉದ್ಗಾರದೊಂದಿಗೇ ದೇವಾಲಯದಲ್ಲೊಂದು ಪ್ರದಕ್ಷಿಣೆ ಹಾಕಿ ಹೊರಬಂದೆವು.
“ಸ್ವಾಮೀಜಿ, ಆಶೀರ್ವಾದ್ ಕೀಜಿಯೇ”
-----------------------------------
ದೇವಾಲಯದಿಂದ ಹೊರಬಂದು ಈಶ್ವರನ ಪ್ರತಿಮೆ ಮುಂದಿನ ರಸ್ತೆಯಲ್ಲಿ ನಾನು, ವಿಶ್ವನಾಥನ್ ಮತ್ತು ನಮ್ಮ ತಂದೆ ನಡೆದು ಹೋಗುವಾಗ ಸಾತ್ವಿಕ ಮುಖಲಕ್ಷಣವಿದ್ದ ಅಪರಿಚಿತ ಮಹಿಳೆಯೊಬ್ಬರು ಅವಸರ-ಅವಸರವಾಗಿ ನಮ್ಮ ಬಳಿ ಬಂದರು. ನಾವು ಅವರತ್ತ ಅಚ್ಚರಿಯಿಂದ ನೋಡುತ್ತಿರುವಂತೆಯೇ, ನಮ್ಮ ತಂದೆಯವರ ಬಳಿ “ಸ್ವಾಮೀಜಿ, ಆಶೀರ್ವಾದ್ ಕೀಜಿಯೇ” ಎಂದು ಹಿಂದಿಯಲ್ಲಿ ತುಂಬ ವಿನಯದಿಂದ ಕೇಳಿಕೊಂಡರು. ಪಕ್ಕದಲ್ಲೇ ಇದ್ದ ನಮಗೆ ಇವರು ಯಾರೋ ಉತ್ತರ ಭಾರತೀಯರೆಂಬುದು ಅರ್ಥವಾಯಿತು. ಅವರಿಗೆ ಕನ್ನಡ ಬರುವುದಿಲ್ಲವೆಂಬುದೂ ಗೊತ್ತಾಯಿತು. ನಮ್ಮ ತಂದೆಗೆ ವಿಷಯ ತಿಳಿಸಿದೆವು. “ಒಳ್ಳೆಯದಾಗಲಿ” ಎಂದು ಹರಸಿದರು. ಆದರೆ ಆ ಮಹಿಳೆಯು ಅಷ್ಟಕ್ಕೇ ಬಿಡದೆ ನಮ್ಮ ತಂದೆಯವರ ಬಲಹಸ್ತವನ್ನು ಕ್ಷಣಕಾಲ ತನ್ನ ತಲೆಯ ಮೇಲಿಟ್ಟುಕೊಂಡು ಸಂತೋಷ ಪಟ್ಟು, ಕೃತಜ್ಞತೆ ಸಲ್ಲಿಸಿ ಹೊರಟುಹೋದರು. ನಾನು ಮತ್ತು ವಿಶ್ವನಾಥನ್ ಈ ಪ್ರಸಂಗ ನೋಡುತ್ತ ಹಾಗೆಯೇ ಮೂಕರಾಗಿ ನಿಂತಿದ್ದೆವು.







No comments:

Post a Comment